ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಷ್ಟ್ರವ್ಯಾಪಿ ರೈತರ ಸ್ವಾಭಿಮಾನವನ್ನು ಬಡಿದೆಬ್ಬಿಸಿರುವ ದೆಹಲಿಯ ಹೋರಾಟ ಜೂನ್ ತಿಂಗಳೊಳಗೆ ನಿಲ್ಲಲಿದೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ. ಆದರೆ, ಈ ಹೋರಾಟ ನ್ಯಾಯ ಸಿಗುವವರೆಗೆ ಮುಂದುವರಿಯಲಿದೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ರಾಷ್ಟ್ರೀಯ ರೈ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ
ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದುವೇಳೆ ಸರ್ಕಾರ ಮಾತನಾಡಲು ಬಯಸಿದ್ದಲ್ಲಿ ನಾವು ಚರ್ಚೆಗೆ ಸಿದ್ಧ. ಆದರೆ, ನಾವಾಗೇ ಚರ್ಚೆಗೆ ಮುಂದಾಗುವುದಿಲ್ಲ ಎಂದು ಹೇಳಿದರು.
ದೇಶದ ಜನರ ರೊಟ್ಟಿಯನ್ನು ತಿಜೋರಿಯಲ್ಲಿ ಇಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಭಾರಿ ತೊಂದರೆಯಾಗಲಿದೆ. ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಲಿವೆ.
– ರಾಕೇಶ್ ಟಿಕಾಯತ್, ರಾಷ್ಟ್ರೀಯ ರೈ ಮುಖಂಡ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ದೇಶದ ಕೃಷಿ ವ್ಯವಹಾರದ ವ್ಯವಸ್ಥೆಯನ್ನೇ ಹಾಳು ಮಾಡಲಿವೆ. ಇದರ ಹಿಂದೆ ಎಪಿಎಂಸಿಗಳನ್ನು ಕಬಳಿಸಲು ಮಲ್ಟಿನ್ಯಾಷನಲ್ ಕಂಪೆನಿಗಳಿಗೆ ನೀಡುವ ಹುನ್ನಾರ ಅಡಗಿದೆ. ಪ್ರಸ್ತುತ ತರಕಾರಿ, ಹಣ್ಣು ಹಂಪಲುಗಳನ್ನು ಮಾಲ್ ನಲ್ಲಿ ಖರೀದಿಸುವ ವ್ಯವಸ್ಥೆ ರೂಪುಗೊಂಡಿದೆ. ಬರುವ ದಿನಗಳಲ್ಲಿ ಎಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳ ನಿಯಂತ್ರಣಕ್ಕೆ ಒಳಪಡಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವ್ಯಾಪಾರಿಗಳಿಗೆ ಮೊದಲೇ ಗೊತ್ತಿತ್ತು | ದೇಶದ ರೈತರ ಪಾಲಿಗೆ ಮಾರಕವಾಗಬಲ್ಲ ಕೃಷಿ ಕಾಯ್ದೆ ಜಾರಿ ಬಗ್ಗೆ ವ್ಯಾಪಾರಸ್ಥರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ, ಬೃಹತ್ ಗೋದಾಮುಗಳನ್ನು ಸ್ಥಾಪಿಸಿ, ವಾರಾಂತ್ಯ ಸಂತೆಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಇದರಿಂದ ರೈತರು ಬೀದಿಗೆ ಬಿದಿದ್ದಾರೆ ಎಂದು ಆರೋಪಿಸಿದರು.
ದಾರಿ ತಪ್ಪಲು ರೈತರಲ್ಲಿ ಮಿದುಳಿಲ್ಲವೇ? | ಆಡಳಿತರೂಢ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ರೈತ ಮುಖಂಡ ಯುದ್ಧವೀರ ಸಿಂಗ್, ರೈತರನ್ನು ಯಾರೂ ದಾರಿ ತಪ್ಪಿಸಿಲ್ಲ. ರೈತರಿಗೆ ಸ್ವಂತವಾಗಿ ಯೋಚಿಸುವ ಶಕ್ತಿ ಇದೆ. ಅವರಲ್ಲೂ ಮಿದುಳಿದೆ ಎಂದರು.
ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ)ಗೆ ಕಾನೂನು ರೂಪ ನೀಡಿ ಎಂಬುವುದು ರೈತರ ಆಗ್ರಹವಾಗಿದೆ. ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಅದಕ್ಕೆ ನ್ಯಾಯಯುತ ಬೆಲೆ ನೀಡಬೇಕು. ಇದನ್ನು ಪ್ರಶ್ನಿಸಿದರೆ, ಪ್ರಧಾನಿ ನರೇಂದ್ರ ಅವರು, ಎಂ.ಎಸ್.ಪಿ. ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ ಎಂಬ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಹೋರಾಟ ಆಂದೋಲನದ ಸ್ವರೂಪ ಪಡೆದಿದೆ | ಈ ಮುಂಚೆ ಉತ್ತರ ಪ್ರದೇಶದ ರೈತರಷ್ಟೇ ಪ್ರತಿಭಟನೆಗೆ ಮುಂದಾಗಿದ್ದರು. ಅದು ಕೃಷಿಕರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ನಮ್ಮ ಹೋರಾಟಕ್ಕೆ ಕೃಷಿಕರು, ಕರ್ಮಿಕರು ಮತ್ತು ಹಲವು ಸರ್ಕಾರಿ ಸಂಸ್ಥೆಗಳ ನೌಕರರು ದನಿಗೂಡಿಸಿದ್ದಾರೆ. ಹೀಗಾಗಿ, ಇದು ಆಂದೋಲನದ ಸ್ವರೂಪ ತಾಳಿದೆ ಎಂದರು.
ಸಂವಾದದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ರೈತ ಸಂಘದ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ.ಗಂಗಾಧರ್, ಎಚ್.ಆರ್.ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ ಉಪಸ್ಥಿತರಿದ್ದರು.
https://www.suddikanaja.com/2021/01/19/demand-for-loan-waive-of-farmers/