ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಶಿವರಾತ್ರಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗಿನ ಜಾವದಿಂದಲೇ ಶಿವನ ದೇವಸ್ಥಾನಗಳಲ್ಲಿ ಪೂಜೆ, ಕೈಂಕರ್ಯ, ಅಭಿಷೇಕಗಳು ನಡೆದವು. ಜನ ಬಿಸಿಲನ್ನೂ ಲೆಕ್ಕಿಸದೇ ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದರು.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಶ್ರೀಮಂತ ಇತಿಹಾಸವಿರುವ ಹರಕೆರೆ ರಾಮೇಶ್ವರ ದೇವಸ್ಥಾನದಲ್ಲಿ ಭಕ್ತರ ಆಗಮನಕ್ಕೆ ಪ್ರತ್ಯೇಕ ಸರದಿಯ ವ್ಯವಸ್ಥೆ ಮಾಡಲಾಗಿತ್ತು. ಆಟೋಗಳ ಸಂಚಾರವನ್ನು ನಿಬರ್ಂಧಿಸಲಾಗಿತ್ತು. ತುಂಗೆಯಲ್ಲಿ ಪವಿತ್ರ ಸ್ನಾನ ಮುಗಿಸಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದರು.
25 ಸಾವಿರ ರುದ್ರಾಕ್ಷಿ ವಿತರಣೆ | ವಿನೋಬನಗರ ದೇವಸ್ಥಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಸಂಜೆಯಾಗುತ್ತಿದ್ದಂತೆ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಲ್ಲಿ ರೋಟರಿ ವಿಜಯ್ ಕುಮಾರ್ ಅವರು 10 ಅಡಿ ಗಂಧದ ಕಡ್ಡಿಯನ್ನು ಹಚ್ಚಿ ವಿಶೇಷ ಪೂಜೆ ಮಾಡಿದರು.
ಅರ್ಚಕ ಡಾ.ಜಯಪ್ರಕಾಶ್ ಗುರೂಜಿ ಮತ್ತು ದೇವಸ್ಥಾನ ಸಮಿತಿಯಿಂದ 25 ಸಾವಿರ ರುದ್ರಾಕ್ಷಿ ವಿತರಣೆ ಮಾಡಲಾಯಿತು.
ಶಿರಾಳಕೊಪ್ಪದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಹರಿಹರದ ಮಹಾತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ್ ನಿಂದ ರುದ್ರಾಕ್ಷಿ ಧಾರಣ ಸಂಸ್ಕಾರ ಪಾಲನ ಅಭಿಯಾನದಡಿ ರುದ್ರಾಕ್ಷಿ ವಿತರಿಸಲಾಯಿತು.
ಅಬ್ಬಲಗೆರೆ ಸಮೀಪದ ಈಶ್ವರ ವನದಲ್ಲಿ ಪ್ರಕೃತಿಯ ಮಧ್ಯೆ ಶಿವಪೂಜೆ, ಧ್ಯಾನ ಮಾಡಲಾಯಿತು. ಕೋಟೆ ಭೀಮೇಶ್ವರ ದೇವಸ್ಥಾನ, ವೀರಶೈವ ಕಲ್ಯಾಣ ಮಂದಿರದ ಶಿವನ ದೇವಸ್ಥಾನ, ಜೈಲು ಆವರಣದಲ್ಲಿರುವ ಉಮಾ ಮಹೇಶ್ವರ, ಬಸವನಗುಡಿಯ ಈಶ್ವರ ದೇವಸ್ಥಾನ, ಗಾಂಧಿ ಬಜಾರಿನ ಬಸವೇಶ್ವರ ದೇವಸ್ಥಾನ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಜಾಕಭೈರವೇಶ್ವರ, ಬಿ.ಎಚ್.ರಸ್ತೆಯ ಮೈಲಾರೇಶ್ವರ, ಬಿಬಿ ರಸ್ತೆಯ ಭವಾನಿ ಶಂಕರ ಮತ್ತಿತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.