ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ನಿರಂತರ ಜ್ಯೋತಿ ಯೋಜನೆ ಅಡಿ ಮಾರ್ಗಸೂಚಿ ಪ್ರಕಾರ ಸರಿಯಾಗಿ ಕಾಮಗಾರಿ ನಿರ್ವಹಿಸದಿದ್ದರೂ, ಪಾವತಿ ಮಾಡಲಾಗಿರುವ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
READ | ಖಾಕಿ ಕಾರ್ಯಾಚರಣೆ, ಮಾಸ್ಕ್ ಧರಿಸದವರಿಗೆ ಒಂದೇ ದಿನ ಬಿತ್ತು 1.60 ಲಕ್ಷ ರೂ. ದಂಡ!
ಪೀಢರ್ ಬೇರ್ಪಡಿಸುವಿಕೆ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 41 ಮಾರ್ಗಗಳ ಕಾಮಗಾರಿಗೆ 105 ಕೋಟಿ ರೂ. ಬಿಲ್ಲು ಪಾಸು ಮಾಡಲಾಗಿದೆ. ಪ್ರಸ್ತುತ ಎಲ್ಲ ಮಾರ್ಗಗಳ ಕಾಮಗಾರಿ ಅನುಷ್ಠಾನದ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಯೋಜನೆ ಅನುಷ್ಠಾನದ ಪ್ರಮುಖ ಸ್ಥಳಗಳಲ್ಲಿ ಯೋಜನೆ ಕುರಿತಾಗಿ ಮಾಹಿತಿ ಬೋರ್ಡ್ ಅಳವಡಿಸಲಾಗುತ್ತಿದೆ. ಶಿವಮೊಗ್ಗ ವೃತ್ತದಲ್ಲಿ ಅವಾರ್ಡ್ ನೀಡಲಾದ ಪೂರ್ಣ ಮೊತ್ತಕ್ಕೆ ಇಂಡಿಮ್ನಿಟಿ ಬಾಂಡ್ ಪಡೆಯಲಾಗಿದೆ. ಕಂಬಗಳನ್ನು ನಿಗದಿಪಡಿಸಿದ ತಾಂತ್ರಿಕ ಗುಣಮಟ್ಟಕ್ಕೆ ಅನುಗುಣವಾಗಿ ಅಳವಡಿಸಲಾಗಿದೆಯೇ ಎಂಬುವುದನ್ನು ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದ್ದು, ಏಜೆನ್ಸಿಯವರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಕಾಮಗಾರಿಯಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
– ಕೆಪಿಟಿಸಿಎಲ್ ಅಧಿಕಾರಿ, ಶಿವಮೊಗ್ಗ
ಕೋಟ್ಯಂತರ ವ್ಯತ್ಯಾಸ | ಇದುವರೆಗೆ 28 ಮಾರ್ಗಗಳ ತಪಾಸಣೆ ಕಾರ್ಯ ಪೂರ್ಣಗೊಂಡಿದ್ದು, ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ 71.55 ಕೋಟಿ ರೂ. ಬಿಲ್ ಪಾಸ್ ಮಾಡಲಾಗಿದೆ. ತಪಾಸಣೆಯಲ್ಲಿ ಸಾಮಗ್ರಿಗಳ ಖರೀದಿಯಲ್ಲಿ 4.80 ಕೋಟಿ ರೂ. ಹಾಗೂ ಕಂಬಗಳಿಗೆ ಮಾಡಲಾದ ಕಾಂಕ್ರಿಟ್ ನಲ್ಲಿ 3.65 ಕೋಟಿ ರೂಪಾಯಿ ವ್ಯತ್ಯಾಸ ಕಂಡು ಬಂದಿದೆ. ಭದ್ರಾವತಿಯಲ್ಲಿ ಇನ್ನೂ 10 ಮಾರ್ಗಗಳ ತಪಾಸಣೆ ಕಾರ್ಯ ಬಾಕಿ ಇದ್ದು ಎಲ್ಲ ಮಾರ್ಗಗಳ ತಪಾಸಣೆ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಚಿವರು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಳಂಬ ಕಾಮಗಾರಿಗೆ ದಂಡ ವಿಧಿಸಿ | ಜಿಲ್ಲೆಯಲ್ಲಿ 2017ರಲ್ಲಿ ಕಾಮಗಾರಿ ಅನುಷ್ಠಾನ ಪ್ರಾರಂಭಿಸಲಾಗಿದ್ದು, 2020ರ ಮಾರ್ಚ್ ನಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿತ್ತು. ವಿಳಂಬ ಕಾಮಗಾರಿ ನಿರ್ವಹಿಸಿರುವುದಕ್ಕೆ ದಂಡ ವಿಧಿಸಬೇಕು. ಕಾಮಗಾರಿ ಅನುಷ್ಠಾನ ಪರಿಶೀಲಿಸಲು ತಜ್ಞರ ತಂಡವನ್ನು ರಚಿಸಲಾಗುವುದು. ಈ ತಂಡ ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಜ್ಯೋತಿಯಲ್ಲಿ ಲೋಪ, ತನಿಖಾ ವರದಿ ಸಲ್ಲಿಕೆಗೆ 15 ದಿನಗಳ ಡೆಡ್ ಲೈನ್