ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಸಿಬ್ಬಂದಿಯನ್ನು ಕೂಡ ಇತರೆ ಇಲಾಖೆಗಳ ಸಿಬ್ಬಂದಿಯಂತೆ ಕೊರೊನಾ ವಾರಿಯರ್ಸ್ ಗಳಾಗಿ ಪರಿಗಣಿಸಿ, ಅವರಿಗೆ ಎಲ್ಲ ರೀತಿಯ ನೆರವು ಸಹಕಾರ ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
https://www.suddikanaja.com/2021/05/04/covid-meeting-in-bhadravathi/
ಸೋಮವಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೈಸೂರು ಮತ್ತು ಬೆಂಗಳೂರು ವಿಭಾಗದ ಎಲ್ಲ ಜಿಲ್ಲೆಗಳ ಜಿಪಂ ಸಿಇಒ, ಆಯಾ ಜಿಲ್ಲೆ ವ್ಯಾಪ್ತಿಯ ಪಿಡಿಒಗಳ ವಿಡಿಯೋ ಸಂವಾದದ ಬಳಿಕ ಮಾಧ್ಯಮ ಜೊತೆ ಮಾತನಾಡಿದರು.
ಜಾಯಿಂಟ್ ಫ್ಯಾಮಿಲಿ ಐಸೋಲೇಷನ್ ಗೆ ಕ್ರಮ |ಗ್ರಾಮೀಣ ಪ್ರದೇಶದಲ್ಲಿನ ಮನೆಗಳಲ್ಲಿ ಈಗಲೂ ಒಟ್ಟು ಕುಟುಂಬ ಪದ್ಧತಿ ಇದೆ. ಇಂತಹ ಮನೆಗಳಲ್ಲಿ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಅಸಾಧ್ಯವಾದುದರಿಂದ ಸೋಂಕು ಹೆಚ್ಚಾಗುವ ಸಂಭವ ಜಾಸ್ತಿ ಇದೆ. ಆದ್ದರಿಂದ, ಸೋಂಕಿತರಿಗೆ ಮನೆಯಲ್ಲಿದ್ದು ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡದೆ, ಅವರಿಗಾಗಿ ಕಲ್ಪಿಸಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಳುಹಿಸಿ ಕೊಡಬೇಕು. ಸ್ಥಳೀಯ ಜನಪ್ರತಿನಿಧಿಗಳೂ ಕೂಡ ಸಹಕರಿಸುವ ಅಗತ್ಯವಿದೆ ಎಂದರು.
https://www.suddikanaja.com/2021/02/15/shivamogga-shikaripura-railway-land-acquisition-work-will-end-in-2-months/
ಪಿಡಿಒಗಳು ಗ್ರಾಮದ ಸ್ವಚ್ಚತೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅಗತ್ಯ ಸೌಲಭ್ಯ ಇರುವ ಬಗ್ಗೆ ಗಮನಹರಿಸಬೇಕು. ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಸಂತೆ, ಜಾತ್ರೆ, ಸಭೆ-ಸಮಾರಂಭಗಳನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು ಎಂದು ಸೂಚಿಸಿದರು.
50 ಸಾವಿರ ರೂ. ಅನುದಾನ | ಈ ಎಲ್ಲ ಚಟುವಟಿಕೆಗಳ ನಿರ್ವಹಣೆಗಾಗಿ 14ನೇ ಹಣಕಾಸಿನ ಅನುದಾನ, 15ನೇ ಹಣಕಾಸಿನ ನಿರ್ಬಂಧಿತ ಅನುದಾನ ಹಾಗೂ ಸರ್ಕಾರವು ಎಸ್ ಡಿ ಆರ್ ಎಫ್ ಯೋಜನೆಯಡಿ ಈಗಾಗಲೇ ಬಿಡುಗಡೆಗೊಳಿಸಿರುವ 50,000 ರೂಪಾಯಿ ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಅಗತ್ಯವಿದ್ದಲ್ಲಿ ಇನ್ನಷ್ಟು ಅನುದಾನವನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ವಿಡಿಯೋ ಸಂವಾದದಲ್ಲಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತ ಅತೀಕ್ ಅಹ್ಮದ್, ಕಾರ್ಯದರ್ಶಿ ಉಮಾ ಮಹದೇವನ್ ಸೇರಿದಂತೆ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ವ್ಯಾಪ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು ಭಾಗವಹಿಸಿದ್ದರು.
https://www.suddikanaja.com/2021/03/31/ks-eshwarappa-wrote-latter-against-yadiyurappa-to-bjp-leaders/