ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಅತ್ಯಂತ ಹಳೆಯ ವಂದನಾ ಟಾಕೀಸ್ ಗೆ ಗುರುವಾರ ಬೆಳಗಿನ ಜಾವ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳ 3-4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.
ಸುಮಾರು ವರ್ಷಗಳಿಂದ ವಂದನಾ ಟಾಕೀಸ್ ಬಂದ್ ಇದ್ದು, ಇಲ್ಲಿ ಚಿತ್ರ ಪ್ರದರ್ಶನ ಕೂಡ ನಿಲ್ಲಿಸಲಾಗಿದೆ. ಆದರೆ, ಒಳಗಡೆ ಅಂದಾಜು 15-20 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳು ಇವೆ. ಆದರೆ, ಅಗ್ನಿ ಅವಘಡದಿಂದಾಗಿ ಅವುಗಳಿಗೆ ಹಾನಿ ಸಂಭವಿಸಿಲ್ಲ. ಅಂದಾಜು ನಾಲ್ಕೈದು ಸಾವಿರ ರೂಪಾಯಿ ಮೌಲ್ಯದ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಗಾಂಧಿ ಬಜಾರ್ ನಲ್ಲಿ ಅಗ್ನಿ ಅವಘಡಕ್ಕೆ ಕಾರಣ, ಆದ ನಷ್ಟದ ಮಾಹಿತಿ ಇಲ್ಲಿದೆ
ಆವರಿಸಿತ್ತು ದಟ್ಟ ಹೊಗೆ | ಕುಂಬಾರ ಬೀದಿಯಲ್ಲಿರುವ ವಂದನಾ ಟಾಕೀಸ್ ಒಳಗೆ ಬೆಂಕಿ ತಗುಲಿದ್ದೇ ಸ್ಥಳೀಯರು ಬೆಳಗಿನ ಜಾವ 4.30 ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕಟ್ಟಡ ಹಳೆಯಾಗಿದ್ದರಿಂದ ಏಕಾಏಕಿ ಕಾರ್ಯಾಚರಣೆ ನಡೆಸದೇ ಮೊದಲು ಪರಿಸ್ಥಿತಿಯನ್ನು ಅವಲೋಕಿಸಿ, ಕಟ್ಟಡ ಚಾವಣಿಯನ್ನು ತೆಗೆದು ಬೆಂಕಿ ನಂದಿಸಿದ್ದಾರೆ. ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಏನೂ ಕಾಣುತ್ತಿರಲಿಲ್ಲ. ಆದರೂ ಜೀವ ಪಣಕಿಟ್ಟು ಕಾರ್ಯಾಚರಣೆ ಮಾಡಿದ್ದಾರೆ.
ಕಿಡಿಗೇಡಿಗಳ ಕೃತ್ಯ | ಚಿತ್ರ ಪ್ರದರ್ಶನ ಸ್ಥಗಿತಗೊಂಡಿರುವುದರಿಂದ ಈ ಜಾಗದಲ್ಲಿ ಸಂಜೆಯಾಗುತ್ತಿದ್ದಂತೆಯೇ ಕಿಡಿಗೇಡಿಗಳ ಅಡ್ಡಾ ಆಗಿ ಪರಿವರ್ತನೆ ಆಗುತ್ತದೆ. ಅನೈತಿಕ ಕೃತ್ಯಗಳು ನಡೆಯುತ್ತಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಚಿತ್ರಮಂದಿರದ ಅಕ್ಕಪಕ್ಕದ ಜನರಿಗೆ ಕಿಡಿಗೇಡಿಗಳಿಂದಾಗಿ ಭಾರಿ ಸಮಸ್ಯೆಯಾಗುತ್ತಿದೆ. ಇದನ್ನು ನಿಗ್ರಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಸ್ಥಳೀಯರ ಆರೋಪವಾಗಿದೆ. ಆದರೆ, ಘಟನೆ ನಡೆದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮಾಲೀಕರೊಂದಿಗೆ ಮಾತುಕತೆ ಆಡಿದ್ದಾರೆ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವಂತೆ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಕೆ.ಎನ್.ಪ್ರವೀಣ್, ಸಿಬ್ಬಂದಿ ಸುನೀಲ್, ಮಂಜುನಾಥ್, ವಿಶ್ವನಾಥ್, ಮೆಸ್ಕಾಂ ಸಿಬ್ಬಂದಿ ಕೂಡ ಭಾಗವಹಿಸಿದ್ದರು.