ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಸಾಗರ, ಹೊಸನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಶನಿವಾರ ಸುರಿದ ಧಾರಾಕಾ ಮಳೆಗೆ ಸಾಗರ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ.
ಆನಂದಪುರಂ-ತೀರ್ಥಹಳ್ಳಿ ರಸ್ತೆಯಲ್ಲಿ ಮರ ರಸ್ತೆಯ ಮೇಲೆ ಉರುಳಿದ್ದು, ಹಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿ ಅಕ್ಕಪಕ್ಕದ ಕಂಬದ ತಂತಿಗಳು ತುಂಡಾಗಿದ್ದು, ಯಡೇಹಳ್ಳಿ, ಕೊರಲಿಕೊಪ್ಪ, ಅಂದಾಸುರ ಮತ್ತಿತರ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ರಸ್ತೆಯ ಮೇಲೆ ಮರ ಬಿದ್ದಿದ್ದರಿಂದ ವಾಹನಗಳು ಮುರುಘಾಮಠ- ಇಸ್ಲಾಂಪುರ, ಅಂದಾಸುರ ಮಾರ್ಗವಾಗಿ ಸಂಚರಿಸಿದವು.
ಸಾಗರ ಪಟ್ಟಣದ ನೆಹರೂ ಮೈದಾನದಲ್ಲಿ ಮರ ಮನೆಯೊಂದರ ಮೇಲೆ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಅಲ್ಲದೇ ಕಂಬವೂ ಮುರಿದಿದೆ. ಆಚಾಪುರ, ಮಜಿರೆಯ ಮುರುಘಾಮಠ ಸಮೀಪ ಮನೆಯೊಂದರ ಮೇಲೆ ಮರ ಬಿದ್ದಿದೆ. ಹೀಗೆ ಹಲವೆಡೆ ಮುಂಗಾರು ಮಳೆಯು ನಾನಾ ಅವಘಡಗಳನ್ನು ಸೃಷ್ಟಿಸಿದೆ.
ಹೊಸನಗರ, ತೀರ್ಥಹಳ್ಳಿ ಭಾಗದಲ್ಲೂ ಮಳೆ ಮುಂದುವರಿದಿದೆ. ಶಿವಮೊಗ್ಗದಲ್ಲಿ ಭಾನುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಳೆ ಅಲ್ಪ ವಿರಾಮ ನೀಡಿದೆ. ಆದರೆ, ತುಂಗೆಯ ಆರ್ಭಟ ಮುಂದುವರಿದಿದೆ.
https://www.suddikanaja.com/2021/01/06/rainfall-in-shivamogga-malenadu/