ಸುದ್ದಿ ಕಣಜ.ಕಾಂ
ದಾರಿಯನ್ನೇ ಬದಲಿಸಿಕೊಂಡ ಗಜಪಡೆ, ತೋಟಕ್ಕೆ ನುಗ್ಗಿ ಮಾಡಿದ ದಾಂಧಲೆ, ಬಾಳೆ, ಅಡಕೆ ಗಿಡ ಧ್ವಂಸ ಆನೆ ಬುದ್ಧಿವಂತ ಪ್ರಾಣಿ ಎಂಬುವುದು ಗುಟ್ಟಾಗೇನಿಲ್ಲ. ಮನುಷ್ಯರ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವಷ್ಟು ಶಕ್ತಿ ಈ ಆನೆ ಸಂತತಿಗಿದೆ. ಅದು ಮತ್ತೊಮ್ಮೆ ಸಾಬೀತು ಆಗಿದೆ.
ಕೆಲವು ತಿಂಗಳುಗಳ ಹಿಂದಷ್ಟೇ ಉಂಬ್ಳೆಬೈಲು ಭಾಗದಲ್ಲಿ ಪುಂಡಾಟ ಮೆರೆದಿದ್ದ ಗಜ ಪಡೆಯನ್ನು ಮತ್ತೆ ಕಾಡಿಗೆ ಅಟ್ಟುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಟ್ರಂಚ್ ಹಾಕಿದ್ದರು. ಆದರೆ, ಆನೆಗಳು ತಮ್ಮ ದಾರಿಯನ್ನು ಬದಲಿಸಿಕೊಂಡಿವೆ.
ಅಡಕೆ, ಬಾಳೆ ಗಿಡಗಳು ಧ್ವಂಸ | ಈ ಸಲ ಲಿಂಗಾಪುರ ಮಾರ್ಗವಾಗಿ ಲಕ್ಕಿನಕೊಪ್ಪದ ಗ್ರಾಮಗಳಿಗೆ ನುಗ್ಗಿವೆ. ಅಲ್ಲಿಯ ತೋಟಗಳಿಗೆ ನುಗ್ಗಿದ ಆನೆಗಳು ಬಾಳೆ, ಅಡಕೆ ಮತ್ತು ತೆಂಗಿನ ಮರಗಳಿಗೆ ಹಾನಿ ಮಾಡಿವೆ. ಅಡಕೆ ಮರಗಳನ್ನು ಬುಡ ಸಮೇತ ಕಿತ್ತೊಗೆದಿವೆ.
ಗ್ರಾಮಸ್ಥರಲ್ಲಿ ಆತಂಕ | ಆನೆಗಳು ಲಕ್ಕಿನಕೊಪ್ಪಕ್ಕೆ ನುಗ್ಗಿ ಪುಂಡಾಟ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇನ್ನೇನು ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಿದ್ದಾರೆ ಎನ್ನುವ ಹೊತ್ತಿಗೆ ಮತ್ತೊಮ್ಮೆ ಆನೆಗಳ ಕಾಟ ಶುರುವಾಗಿದೆ. ಇದರಿಂದ ಭಾರಿ ನಷ್ಟವಾಗುತ್ತಿದೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.