ಸುದ್ದಿ ಕಣಜ.ಕಾಂ | SHIVAMOGGA CITY | SUDA
ಶಿವಮೊಗ್ಗ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅಟಲ್ ಬಿಹಾರಿ ವಾಜಪೇಯಿ ವಸತಿ ಬಡಾವಣೆಯ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯ ಕಾನೂನು ತೊಡಕನ್ನು ಇತ್ಯರ್ಥಗೊಳಿಸಿ, 560 ಫಲಾನುಭವಿಗಳ ಪೈಕಿ ಅರ್ಹರಾದ 130 ಫಲಾನುಭವಿಗಳಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಖಾತಾ ಪತ್ರ ವಿತರಿಸಿದರು.
https://www.suddikanaja.com/2021/01/23/atal-bihari-vajpayee-layout-issue-will-solve-in-3-months/
ನಗರದ ಪೊಲೀಸ್ ಚೌಕಿಯ ವಿಪ್ರ ಸಭಾಂಗಣದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಭಾನುವಾರ ಏರ್ಪಡಿಸಿದ್ದ ಮಲ್ಲಿಗೇನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಬಡಾವಣೆಯಲ್ಲಿನ ನಿವೇಶನ ಹಂಚಿಕೆಯಲ್ಲಿ ಕ್ರಮಬದ್ಧವಾಗಿರುವ ನಿವೇಶನ ಹಂಚಿಕೆದಾರರಿಗೆ ಖಾತಾ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಸೂಡಾ ಅಧ್ಯಕ್ಷರ ಅವಿರತ ಶ್ರಮದಿಂದ ಸಮಸ್ಯೆಗಳನ್ನು ತೊಡೆದು ಹಾಕಿ ಖಾತಾ ಪತ್ರಗಳನ್ನು ವಿತರಿಸುತ್ತಿರುವುದು ಹರ್ಷದ ಸಂಗತಿಯಾಗಿದೆ. ಅನೇಕ ವರ್ಷಗಳಿಂದ ನಿವೇಶನಕ್ಕಾಗಿ ಕಾದಿದ್ದು, ಇಂದು ನಿವೇಶನ ಪಡೆಯುತ್ತಿರುವ ಫಲಾನುಭವಿಗಳು ತ್ವರಿತಗತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ಕಳೆಯುವಂತಾಗಬೇಕು ಎಂದರು.
ಈ ಬಡಾವಣೆಯಲ್ಲಿ ಕಲ್ಪಿಸಬೇಕಾದ ಮೂಲ ಸೌಕರ್ಯಗಳ ಬಗ್ಗೆ ಅಲ್ಲಿನ ನಿವಾಸಿಗಳು ಈಗಾಗಲೇ ತಮ್ಮ ಗಮನಕ್ಕೆ ತಂದಿದ್ದು, ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉಳಿದ ಅರ್ಹ ಫಲಾನುಭವಿಗಳಿಗೂ ಶೀಘ್ರದಲ್ಲಿ ನಿವೇಶನದ ಖಾತಾ ಪತ್ರಗಳನ್ನು ಹಂಚಿಕೆ ಮಾಡಲು ಕ್ರಮವಹಿಸಲಾಗುವುದು ಎಂದರು.
https://www.suddikanaja.com/2021/04/20/encroachment-in-suda-layout-at-urdgadur-instruction-to-clearance/
ಅತ್ಯಲ್ಪ ಅವಧಿಯಲ್ಲಿ ನಿವೇಶನಗಳ ಹಂಚಿಕೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಸೂಡಾ ಆರಂಭದ ಅವಧಿಯಿಂದ ಅನೇಕ ಅಧ್ಯಕ್ಷರುಗಳ ಆಡಳಿತಾವಧಿಯಲ್ಲಿ ಇದುವರೆಗೆ ಸುಮಾರು 16 ಬಡಾವಣೆಗಳನ್ನು ಸೃಜಿಸಿ, ಸಹಸ್ರಾರು ನಿವೇಶನಗಳನ್ನು ಸರ್ಕಾರದ ನಿಯಾಮನುಸಾರ ಅರ್ಹರಿಗೆ ವಿತರಿಸಲಾಗಿದೆ. ಮೂಲೆಯ ನಿವೇಶನಗಳನ್ನು ಬಹಿರಂಗ ಹರಾಜು ಮೂಲಕ ವಿತರಿಸಲಾಗಿದೆ.
ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆ ಸೃಜಿಸುವಲ್ಲಿ ಆಗಿದ್ದ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ಸಚಿವರು, ಸಂಸದರ ನೆರವು ಹಾಗೂ ಸಹಕಾರವನ್ನು ಸ್ಮರಿಸುವುದಾಗಿ ತಿಳಿಸಿದ ಅವರು, ಉಳಿದಿರುವ ಫಲಾನುಭವಿಗಳಿಗೂ ನಿವೇಶನ ಅತ್ಯಲ್ಪ ಅವಧಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಅರ್ಹರಾದ 131 ಫಲಾನುಭವಿಗಳಿಗೆ ಖಾತಾ ಪತ್ರಗಳನ್ನು ಸಚಿವರು, ಸಂಸದರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ಚನ್ನಬಸಪ್ಪ, ಅನಿತಾ ರವಿಶಂಕರ್ ಉಪಸ್ಥಿತರಿದ್ದರು.
https://www.suddikanaja.com/2021/02/20/vajapeyee-layout-aam-admi-party-demand-for-re-investigation/