ಸುದ್ದಿ ಕಣಜ.ಕಾಂ | TALUK | SPECIAL REPORT
ಹೊಸನಗರ: ಇದು ಹೆಸರಿಗಷ್ಟೇ ದೊಡ್ಡ ಗ್ರಾಮ ಪಂಚಾಯಿತಿ. ಆದರೆ, ಈ ಹೆಗ್ಗಳಿಕೆಗೆ ತಕ್ಕ ಮೂಲಸೌಕರ್ಯಗಳು ಇಲ್ಲಿಲ್ಲ.
ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆಸರೆ ಗ್ರಾಮದ ಸ್ಥಿತಿ ಇದು. ಈ ಗ್ರಾಮಕ್ಕೆ ಹೊಂದಿಕೊಂಡಿರುವ ಊರಿನಲ್ಲಿ ಸರಿಯಾದ ರಸ್ತೆ ಮಾರ್ಗಕ್ಕಾಗಿ ದಿನ ನಿತ್ಯ ಸಂಕಟ ಪಡಬೇಕಾಗಿದೆ. ಆದರೆ, ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲ.
ಕಳೆದ ನಾಲ್ಕೈದು ವರ್ಷದಿಂದ ಬಾಣಿಗದಿಂದ ಹುಣಸೆಕೊಪ್ಪ ನಿಂಬೇಸರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಸಂಪೂರ್ಣ ಹಾಳಾಗಿದೆ. ಕಿರು ಸೇತುವೆ ಸಹ ದುರಸ್ತಿ ಇಲ್ಲದೆ ಶಿಥಿಲಗೊಂಡಿವೆ.
ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ಕಿರು ಸೇತುವೆ
ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕಿರು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ರಸ್ತೆಯಲ್ಲಿ ಜನ ಓಡಾಡಲು ಹಾಗೂ ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಭೀತಿ
ದಿನ ನಿತ್ಯ ಶಾಲಾ ಮಕ್ಕಳು ಸಹ ಇದೆ ಮಾರ್ಗದಲ್ಲಿ ಸಂಚರಿಸುವ ದಾರಿಯಾಗಿದ್ದು, ಮಳೆಗಾಲದ ನೀರಿನ ಹರಿವಿಗೆ ಸೇತುವೆಯ ತಡೆಗೋಡೆ ಮುರಿದಿದ್ದು, ರಸ್ತೆ ಪಕ್ಕದಲ್ಲಿ ಮಣ್ಣು ಕುಸಿದಿದೆ. ಇದರಿಂದಾಗಿ, ಕಂದಕ ಸೃಷ್ಟಿಯಾಗಿದ್ದು ಮಕ್ಕಳನ್ನು ಹೊರಗಡೆ ಕಳಿಸಲು ಪೋಷಕರು ಭಯ ಪಡುತ್ತಿದ್ದಾರೆ.
https://www.suddikanaja.com/2020/12/31/car-fraud-by-a-person-in-shivamogga-do-you-know-where-it-found/
ಈ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಆಡಳಿತ ಸಿಬ್ಬಂದಿ ಹಾಗೂ ಸದಸ್ಯರುಗಳ ಹತ್ತಿರ ಮೌಖಿಕವಾಗಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಆದರೆ, ಯಾವ ಪ್ರಯೋಜನವೂ ಆಗಿಲ್ಲ ಎಂಬುವುದು ಗ್ರಾಮದ ಯುವಕ ವೆಂಕಟೇಶ್ ಆರೋಪ.
ಕ್ಷೇತ್ರದ ಶಾಸಕರು, ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳು ಇದರೆಡೆಗೆ ಗಮನಹರಿಸಬೇಕು. ಗ್ರಾಮಸ್ಥರ ಗೋಳಿಗೆ ಇತಿಶ್ರೀ ಹಾಡಬೇಕು. ಪಕ್ಷಾತೀತವಾಗಿ ಊರಿನ ಮೂಲಸೌಕರ್ಯಗಳ ಕಡೆಗೆ ಗಮನ ಹರಿಸಬೇಕು.
ವರದಿ | ಅಜಿತ್ ಗೌಡ ಬಡೇನಕೊಪ್ಪ