ಸುದ್ದಿ ಕಣಜ.ಕಾಂ | DISTRICT | POLITICS
ಶಿವಮೊಗ್ಗ: ವಿವಿಧ ಅಭಿವೃದ್ಧಿ ಯೋಜನೆಗಳ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಂಎಲ್.ಸಿ ಮತ್ತು ಪಾಲಿಕೆಯ ವಿರೋಧ ಪಕ್ಷ ನಾಯಕರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿರುವುದಾಗಿ ಆರೋಪಿಸಿ ಕಾಂಗ್ರೆಸ್ ಮುಖಂಡರು ಭಾನುವಾರ ಪ್ರತಿಭಟನೆ ನಡೆಸಿದರು. ಈ ವೇಳೆ, ಪೊಲೀಸರು ತಡೆದು 20ಕ್ಕೂ ಅಧಿಕ ಮುಖಂಡರಿಗೆ ವಶಕ್ಕೆ ಪಡೆದಿದ್ದಾರೆ.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು, ಪೊಲೀಸರ ಮಧ್ಯಪ್ರವೇಶ (VIDEO REPORT)
ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹಾದುಹೋಗುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆ, ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಾಗೂ ತುಂಗಾ ನದಿ ಮೇಲ್ಸೇತುವೆ ಕಾಮಗಾರಿ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಪಕ್ಷದ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಹಾಗೂ ಯಮುನಾ ರಂಗೇಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಲಾಗಿದೆ.
ಆಹ್ವಾನ ಪತ್ರಿಕೆಯಲ್ಲಿ ಹೆಸರುಗಳು ಹಾಕಿಲ್ಲ
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಮುದ್ರಿಸಿರುವ ಆಹ್ವಾನ ಪತ್ರಿಕೆಯಲ್ಲಿ ಹೆಸರುಗಳನ್ನು ಹಾಕದೇ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಈ ಕ್ರಮ ವಿರೋಧಿಸಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿದರು. ಈ ಕುರಿತು ಕೇಳಲು ಹೋದಾಗ ಪೊಲೀಸರು ತಡೆದಿದ್ದಾರೆ ಎಂದು ಪಕ್ಷದ ಮುಖಂಡರು ಟೀಕಿಸಿದ್ದಾರೆ.
https://www.suddikanaja.com/2021/03/03/madhu-bangarappa-support-farmer-protest/
ಕೈ ಮುಗಿದು ವೇದಿಕೆಗೆ ಬರ ಮಾಡಿಕೊಂಡ ಈಶ್ವರಪ್ಪ
ವೇದಿಕೆಗೆ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಎಂ.ಎಲ್.ಸಿ ಆರ್.ಪ್ರಸನ್ನಕುಮಾರ್ ಸಿಟ್ಟಿಗೆದ್ದರು. ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಆಗ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಧ್ಯಪ್ರವೇಶಿ ಕೈಮುಗಿದು ವೇದಿಕೆಗೆ ಆಹ್ವಾನಿಸಿದರು. ಬಳಿಕ ಪಾಲಿಕೆ ಆಡಳಿತ ಪಕ್ಷ ನಾಯಕ ಚನ್ನಬಸಪ್ಪ ಅವರು ‘ಪ್ರತಿಭಟನೆ ಮಾಡಿದವರು ಈಗ ವೇದಿಕೆ ಏಕೆ ಹಂಚಿಕೊಂಡಿದ್ದಾರೆ’ ಎಂದು ಟಾಂಗ್ ನೀಡಿದರು. ಮತ್ತೆ ಸಿಟ್ಟಿಗೆದ್ದ ಪ್ರಸನ್ನ ಕುಮಾರ್ ವೇದಿಕೆಯಿಂದ ಕೆಳಗಿಳಿಯಲು ಮುಂದಾದರು. ಈ ಎಲ್ಲ ಬೆಳವಣಿಗೆಗಳ ನಡುವೆ ಕಾರ್ಯಕ್ರಮ ಜರುಗಿತು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಆರ್ ಸಿ. ನಾಯ್ಕ್, ಮೇಹಕ್ ಶರೀಫ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್ ರಾಜ್ಯ ಕಾರ್ಯದರ್ಶಿ ಕೆ.ಚೇತನ್, ಮುಖಂಡರಾದ ರಂಗೇಗೌಡ, ಮೊಹಮ್ಮದ್ ನಿಹಾಲ್, ಬಾಲಾಜಿ, ಎಸ್. ಕುಮರೇಶ್ ಇತರರು ಉಪಸ್ಥಿತರಿದ್ದರು.
https://www.suddikanaja.com/2021/03/13/miss-use-of-police-power-allegation-by-remove-term-siddaramaiah/