ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಹಾಡಹಗಲೇ ವ್ಯಕ್ತಿಯೊಬ್ಬರಿಗೆ ಲಾಂಗ್, ಚಾಕು ತೋರಿಸಿ ಕಾರನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಗೋಪಾಳ ನಿವಾಸಿ ಮೊಹಮ್ಮದ್ ಅಜಗರ್ ಎಂಬಾತನ ಕಾರನ್ನು ಕಸಿದುಕೊಂಡು ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಊರುಗಡೂರು ನಿಸರ್ಗ ಬಡಾವಣೆ ಹತ್ತಿರ ಎಂದಿನಂತೆ ಈತ ಭದ್ರಾವತಿಯಲ್ಲಿರುವ ತಮ್ಮ ಚಿಕನ್ ಅಂಗಡಿಗೆ ಹೋಗುತ್ತಿದ್ದಾಗ ಬೆಳಗಿನ ಜಾವ 5.30ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಕಾರನ್ನು ತಡೆದಿದ್ದಾರೆ. ನಂತರ, ಮೊಹಮ್ಮದ್ ಅಜಗರ್ ಅವರಿಗೆ ಲಾಂಗ್, ಚಾಕು ತೋರಿಸಿ ಕಾರಿನ ಕೀ ಕಸಿದುಕೊಂಡಿದ್ದಾರೆ.
ನಿಸರ್ಗ ಬಡಾವಣೆಯ ಬೈಪಾಸ್ ರಸ್ತೆ ಹತ್ತಿರ ನಾಲ್ವರು ಕಾರಿಗೆ ಅಡ್ಡ ಹಾಕಿ ಒಬ್ಬನು ಲಾಂಗ್ ತೋರಿಸಿದ್ದಾನೆ. ಮತ್ತೊಬ್ಬ ಚಾಕು ತೋರಿಸಿದ್ದಾನೆ. ಇನ್ನಿಬ್ಬರು ಕಾರಿನ ಬಾಗಿಲು ತೆರೆದು ಕಾರಿನ ಮಾಲೀಕ ಅಜಗರ್ ಅವರಿಗೆ ಹೊರಗೆಳೆದಿದ್ದಾರೆ. ನಂತರ, ಕಾರನ್ನು ಕಿತ್ತುಕೊಂಡು ಎಂ.ಆರ್.ಎಸ್ ವೃತ್ತದ ಕಡೆಗೆ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳನ್ನು ಪತ್ತೆ ಹಚ್ಚಿ ಕಾರನ್ನು ಕೊಡಿಸಬೇಕು ಎಂದು ತುಂಗಾನಗರ ಪೊಲೀಸ್ ಠಾಣೆಗೆ ಅಜಗರ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.