ಸುದ್ದಿ ಕಣಜ.ಕಾಂ | TALUK | HUNASODU BLAST
ಶಿವಮೊಗ್ಗ: ಹುಣಸೋಡು ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಕೂಡ ಒಪ್ಪಿಸಿದ್ದಾರೆ. ಆದರೆ, ಈಗ ಸಿಬಿಐ ತನಿಖೆಗೆ ಆಗ್ರಹ ವ್ಯಕ್ತವಾಗುತ್ತಿದೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಜನವರಿ 21ರಂದು ಹುಣಸೋಡು ಸ್ಫೋಟ ಸಂಭವಿಸಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನಲ್ಲಿ ಹಲವು ಪ್ರಭಾವಿಗಳ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ, ಎಫ್.ಎಸ್.ಎಲ್ ವರದಿ ಬಂದಿದೆ. ಆರನೇ ವ್ಯಕ್ತಿಯ ಶವವು ಶಶಿ ಅಲಿಯಾಸ್ ದೇವೇಂದ್ರ ಎಂಬುವವರದ್ದು ಎಂದು ಹೇಳಲಾಗಿದೆ. ಆದರೆ, ಅದನ್ನು ಅವರ ಕುಟುಂಬದವರೇ ಒಪ್ಪಲು ಸಿದ್ಧರಿಲ್ಲ ಎಂದರು.
ಸ್ಫೋಟ ಸಂಭವಿಸಿದ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಶಶಿಯೊಂದಿಗೆ ಹೋಗಿದ್ದ ಎನ್ನಲಾದ ಪುನೀತನಿಗೆ ತನ್ನ ಮೊಬೈಲಿನಿಂದ ಶಶಿ ಕರೆ ಮಾಡಿ, ತಾನು ಮೃತಪಟ್ಟಿಲ್ಲ ಎಂದು ಖಚಿತ ಪಡಿಸಿದ್ದಾನೆ. ಆದರೆ, ವರದಿಯಲ್ಲಿ ಮೃತಪಟ್ಟಿರುವುದನ್ನು ಕೇಳಿ ಕುಟುಂಬದವರೂ ಗಾಬರಿ ಆಗಿದ್ದಾರೆ. ಅವರೂ ಇದನ್ನು ನಂಬುತ್ತಿಲ್ಲ. ಈ ಎಲ್ಲವುಗಳ ಬಗ್ಗೆ ವಾಸ್ತವಾಂಶಗಳು ಹೊರ ಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ತಿಳಿಸಿದರು.
ನನ್ನ ಮಗ ಮೃತಪಟ್ಟಿಲ್ಲ
ಈ ವೇಳೆ ಮಾತನಾಡಿದ ಶಶಿಯ ತಂದೆ ಚಿಕ್ಕಬೋರೇಗೌಡ, ‘ನನ್ನ ಮಗ ಮೃತಪಟ್ಟಿಲ್ಲ. ಆತ ಘಟನೆ ನಡೆದ ಸುಮಾರು ಹೊತ್ತಿನ ಬಳಿಕ ಆತನೊಂದಿಗೆ ಹೋಗಿದ್ದ ಮತ್ತೊಬ್ಬ ಆಟೋ ಚಾಲಕ ಪುನೀತ್ ಜತೆಗೆ ಮಾತನಾಡಿದ್ದಾನೆ. ಆದರೆ, ಪೊಲೀಸರು ಈ ಬಗ್ಗೆ ಮಾಹಿತಿಯೇ ನೀಡುತ್ತಿಲ್ಲ. ಕಾಲ್ ರೆಕಾರ್ಡ್ಸ್ ಸಹ ನೀಡುತ್ತಿಲ್ಲ ಎಂದು ಆಪಾದಿಸಿದರು.
ಸ್ಫೋಟದಲ್ಲಿ ಮೃತಪಟ್ಟಿರುವ ಪ್ರವೀಣ್ ಎಂಬಾತ ಭದ್ರಾವತಿಯ ಆಟೋ ಚಾಲಕ ಶಶಿ, ಪುನೀತ್ ಹಾಗೂ ಕೂಲಿ ಕೆಲಸಗಾರ ನಾಗರಾಜ್ ಎಂಬುವವರನ್ನು ಹುಣಸೋಡಿಗೆ ಕರೆದುಕೊಂಡು ಹೋಗಿದ್ದ ಎಂದು ಕುಟುಂಬದವರು ಹೇಳಿದ್ದಾರೆ.
ನಾಪತ್ತೆಯಾಗಿರುವ ಪುನೀತ್ ತಾಯಿ ರಾಜಮ್ಮ, ನಾಗರಾಜನ ಪತ್ನಿ ಶಾಂತಿ ಉಪಸ್ಥಿತರಿದ್ದರು.
https://www.suddikanaja.com/2021/01/25/hunasodu-blast-case-four-accused-arrested/