ಸುದ್ದಿ ಕಣಜ.ಕಾಂ | DISTRICT | HUNASODU BLAST
ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದಲ್ಲಿ ಕಲ್ಲು ಕ್ರಷರ್ ಸ್ಫೋಟ ಪ್ರಕರಣ ಜಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಆದರೆ, ಈಗ ಅಸಮಾಧಾನದ ಹೊಗೆ ಆಡಲಾರಂಭಿಸಿದೆ. ತನಿಖೆಯ ಬಗ್ಗೆಯೇ ಅಪಸ್ವರಗಳು ಕೇಳಿಬರುತ್ತಿವೆ.
ಇತ್ತೀಚೆಗೆ, ಹೋರಾಟಗಾರ ಗೋ.ರಮೇಶ್ ಗೌಡ ಮಾಧ್ಯಮಗೋಷ್ಠಿಯಲ್ಲಿ ನೇರವಾಗಿ ತನಿಖೆಯಲ್ಲಿ ಲೋಪಗಳ ಮೇಲೆ ಬೆಳಕು ಚೆಲ್ಲಿದ್ದರು. ಅದರ ಬೆನ್ನಲ್ಲೇ ಘಟನೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸ್ ಇಲಾಖೆ ಹೇಳುತ್ತಿರುವ ಆರನೇ ವ್ಯಕ್ತಿ ಶಶಿಯ ಶವದ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಶಶಿ ಅವರ ಕುಟುಂಬದವರೇ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಬಗ್ಗೆ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕುಟುಂಬದವರ ವಾದವೇನು?
ಇತ್ತೀಚೆಗೆ ಡಿಎನ್.ಎ ವರದಿಯಲ್ಲಿ ಹೇಳಿರುವಂತೆ ಆರನೇ ಶವ ಶಶಿ ಅವರದ್ದೆಂದು ಹೇಳಲಾಗಿದೆ. ಆದರೆ, ಅದು ಶಶಿಯದ್ದಲ್ಲ ಎಂದು ಖುದ್ದು ಅವರ ತಂದೆಯೇ ಹೇಳುತಿದ್ದಾರೆ.
ಪೊಲೀಸ್ ದಾಖಲೆ ಪ್ರಕಾರ ಸತ್ತಿದ್ದಾರೆ ಎನ್ನಲಾದವರ ಕುಟುಂಬದವರು ಎಸ್.ಪಿಗೆ ಭೇಟಿ ಮಾಡಿದ್ದು, ಪುನೀತ್, ಶಶಿ ಹಾಗೂ ನಾಗರಾಜ್ ಅವರು ಸತ್ತಿಲ್ಲ. ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನಾಪತ್ತೆ ಆಗಿದ್ದಾರೆ ಎನ್ನಲಾದ ಇವರ ಮೊಬೈಲ್ ಕರೆ ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಮನವಿಮಾಡಿದ್ದಾರೆ.
ರಾಜಮ್ಮ, ಗೋ. ರಮೇಶ್ ಗೌಡ ಉಪಸ್ಥಿತರಿದ್ದರು.