ಸುದ್ದಿ ಕಣಜ.ಕಾಂ | DISTRICT | MALENADU
ಶಿವಮೊಗ್ಗ: ಕಂದಾಯ ಸಚಿವ ಆರ್.ಅಶೋಕ್ ಅವರು ಅಧಿವೇಶನದಲ್ಲಿ ನೀಡಿರುವ ಹೇಳಿಕೆ ನಡುಕ ಹುಟ್ಟಿಸಿದೆ. ಸೊಪ್ಪಿನ ಬೆಟ್ಟ ಹಾಗೂ ಕಾನು ಅನಧಿಕೃತ ಸಾಗುವಳಿ ಹಕ್ಕು ಮಂಜೂರಾತಿಗೆ ಅವಕಾಶವಿಲ್ಲ ಎಂದು ಹೇಳಿದ್ದರಿಂದ ಜನರು ಗಾಬರಿಯಲ್ಲಿದ್ದಾರೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸಚಿವರ ಹೇಳಿಕೆಯಿಂದ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದವರಲ್ಲಿ ಕಳವಳ ಉಂಟಾಗಿದೆ ಎಂದು ಹೇಳಿದರು.
ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನ ಬೆಟ್ಟ, ಕಾನು, ಕುಮ್ಕಿ ಬೆಟ್ಟ ಭೂಮಿ, ಜಮ್ಮಾ ಬಾಣೆ ಭೂಮಿ, ಮೋಟಸ್ಥಲ್ ತಳಿ ಭೂಮಿಗಳ ಅನಧಿಕೃತ ಸಾಗುವಳಿ ಸಕ್ರಮೀಕರಣಕ್ಕೆ ಹಾಗೂ ಮಂಜೂರಾತಿಗೆ ಅವಕಾಶವಿಲ್ಲ. ಸಾವಿರಾರು ಬಗರ್ ಹುಕುಂ ಸಾಗುವಳಿದಾರರು ತಮ್ಮ ಬದುಕಿಗಾಗಿ ಮಾಡಿಕೊಂಡಿರುವ ಸಾಗುವಳಿ ಭೂಮಿ ಹಾಗೂ ವಸತಿ ಹಕ್ಕನ್ನು ಕಳೆದುಕೊಂಡು ಜೈಲು ಶಿಕ್ಷೆ ಅನುಭವಿಸುವುದಲ್ಲದೇ ಹಾಗೂ ನಿರ್ಗತಿಕರಾಗಲಿದ್ದಾರೆ ಎಂದರು.
2010ರಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆ ವಾಪಸ್ ಪಡೆಯಬೇಕು. ಈಗಾಗಲೇ ಅನಧಿಕೃತ ಸಾಗುವಳಿ, ವಸತಿ ಕಲ್ಪಿಸಿಕೊಂಡಿರುವ ಮತ್ತು ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರ ರಕ್ಷಣೆಗಾಗಿ ಕೂಡಲೇ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕು. ಭೂ ಮಂಜೂರಾತಿಗೆ ಅವಕಾಶ ಕಲ್ಪಿಸಬೇಕು. ಇನ್ನು 15 ದಿನದೊಳಗಾಗಿ ಅವಕಾಶ ಕಲ್ಪಿಸದಿದ್ದಲ್ಲಿ ಮಲೆನಾಡು ಭಾಗದ ಕೆಲವು ತಾಲೂಕುಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಿ.ಸಿ.ನಿರಂಜನ್, ಹೊಳೆಮಡಿಲು ವೆಂಕಟೇಶ್, ಆದಿಮೂರ್ತಿ ಉಪಸ್ಥಿತರಿದ್ದರು.
https://www.suddikanaja.com/2021/02/28/the-antiquity-of-kannada-language-in-northern-kannada/