ಸುದ್ದಿ ಕಣಜ.ಕಾಂ | CITY | HUNASODU BLAST
ಶಿವಮೊಗ್ಗ: ಹುಣಸೋಡು ಗ್ರಾಮದಲ್ಲಿ ಕಲ್ಲು ಕ್ವಾರಿ ಸ್ಫೋಟಗೊಂಡು 8 ತಿಂಗಳು ಗತಿಸಿದರೂ ಇದುವರೆಗೆ ಪರಿಹಾರ ಸಂತ್ರಸ್ತರ ಕೈಸೇರಿಲ್ಲ. ಇದನ್ನು ವಿರೋಧಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಬುಧವಾರ ಪಾದಯಾತ್ರೆ ಮಾಡಲಾಯಿತು.
ಶಿವಪ್ಪ ನಾಯಕ ಪ್ರತಿಮೆಯಿಂದ ಹೊರಟು ಡಿಸಿ ಕಚೇರಿವರೆಗೆ ಪಾದಯಾತ್ರೆ ಮಾಡಲಾಯಿತು. ಗ್ರಾಮಸ್ಥರು ಇದರಲ್ಲಿ ಭಾಗವಹಿಸಿ ಆಡಳಿತ ಯಂತ್ರದ ವಿರುದ್ಧ ಆಕ್ರೋಶ ಹೊರಹಾಕಿದರು.
READ | ಭದ್ರಾವತಿಯಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ನಾಟಾ ವಶ , ಇಬ್ಬರ ಮೇಲೆ ಕೇಸ್
2021ರ ಜನವರಿ 21ರಂದು ರಾತ್ರಿ ಜಿಲೆಟಿನ್ ಕಡ್ಡಿಗಳು, ಸಿಡಿಮದ್ದುಗಳು ಸ್ಫೋಟಗೊಂಡು 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ತೀವ್ರತೆಯಿಂದ ಗೆಜ್ಜೇನಹಳ್ಳಿ, ಹನುಮಂತ ನಗರ, ಅಬ್ಬಲಗೆರೆ, ಮೋಜಪ್ಪ ಹೊಸೂರು, ಬಸವನಗಂಗೂರು, ಚನ್ನಮುಂಭಾಪುರ, ಬೊಮ್ಮನಕಟ್ಟೆ, ಕಲ್ಲಗಂಗೂರು ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಕೆಲವು ಮನೆಗಳ ಮೇಲ್ಛಾವಣಿ ಮತ್ತೆ ಕೆಲವು ಮನೆಗಳ ಟಿ.ವಿ., ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ. ಅನೇಕ ಗ್ರಾಮಸ್ಥರ ಕಿವಿ ತಮಟೆಗಳು ಹಾಳಾಗಿವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಶೇ.10 ಹಾನಿ ಬಗ್ಗೆ ವರದಿ
ವೇದಿಕೆಯ ಸಹಯೋಗದಲ್ಲಿ ಸಂತ್ರಸ್ತರು ನಿರಂತರ ಹೋರಾಟ ನಡೆಸಿದ ಪರಿಣಾಮ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ ಪ್ರತಿಮನೆಗಳು ಕೇವಲ ಶೇ.10ರಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದರು. ಅಷ್ಟೂ ಪರಿಹಾರ ನೀಡಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಪ್ರಕರಣದ ತನಿಖೆಯ ಬಗ್ಗೆ ಸಾಕಷ್ಟು ಅನುಮಾನಗಳಿದ್ದು, ಕೂಡಲೇ ಇದನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದ್ದಾರೆ.
ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ಗೌಡ, ಪ್ರಮುಖರಾದ ಸಂತೋಷ್, ದೇವೇಂದ್ರಪ್ಪ, ನಾಗರಾಜ್, ನಯನ, ನಿಂಗರಾಜ್, ರಾಜು ಗುಜ್ಜರ್, ಲೋಕೇಶ್, ಲಕ್ಷ್ಮಣ್, ಆಸೀಫ್, ಶಿವಣ್ಣ ಉಪಸ್ಥಿತರಿದ್ದರು.
https://www.suddikanaja.com/2021/09/17/hunasodu-blast/