ಸುದ್ದಿ ಕಣಜ.ಕಾಂ | DISTRICT | GANJA WORKSHOP
ಶಿವಮೊಗ್ಗ: ಇನ್ಮುಂದೆ ಗಾಂಜಾ ಸೇವಿಸಿ ಪೊಲೀಸರ ಕೈಯಿಂದ ಎಸ್ಕೇಪ್ ಆಗಲು ಸಾಧ್ಯವೇ ಇಲ್ಲ. ಕಾರಣ, ಬರುವ ದಿನಗಳಲ್ಲಿ ಶಿವಮೊಗ್ಗದಲ್ಲೂ ಗಾಂಜಾ ಸೇವನೆ ಪತ್ತೆಗೆ ಕಿಟ್ ಪರೀಕ್ಷೆಯ ಮೊರ ಹೋಗಲಾಗುತ್ತಿದೆ.
ಈ ಬಗ್ಗೆ ಖುದ್ದು ಡಿ.ಎಚ್.ಒ ಡಾ.ರಾಜೇಶ್ ಸುರಗಿಹಳ್ಳಿ ಅವರೇ ಇದನ್ನು ಹೇಳಿದ್ದಾರೆ.
ನಗರದ ಐ.ಎಂ.ಎ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ವತಿಯಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತು ಶನಿವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಡಿಎಚ್.ಒ ಹೇಳಿದ್ದೇನು?
ಜಿಲ್ಲೆಯಲ್ಲಿ ಗಾಂಜಾ ಸೇವನೆ ವಿಪರೀತವಾಗಿದೆ. ಆದರೆ, ಸೇವನೆ ಕುರಿತು ದಾಖಲೆಗಳಿಲ್ಲದ ಕಾರಣ ಪ್ರಕರಣ ದಾಖಲಿಸುವುದು ಕಷ್ಟವಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಗಾಂಜಾ ಸೇವನೆ ಪತ್ತೆ ಹಚ್ಚಲು ಕಿಟ್ ಗಳ ಮೂಲಕ ಪರೀಕ್ಷೆ ಮಾಡುವ ಪ್ರಯೋಗ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿಯೂ ಈ ಗಾಂಜಾ ಸೇವನೆ ಪತ್ತೆ ಹಚ್ಚುವ ಕಿಟ್ ಗಳನ್ನು ಉಪಯೋಗಿಸಲಾಗುವುದು. ಇದರಿಂದ ಸುಲಭವಾಗಿ ಗಾಂಜಾ ಪ್ರಕರಣಗಳನ್ನು ದಾಖಲಿಸಿ, ಗಾಂಜಾ ಸೇವನೆಗೆ ಕಡಿವಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಮಾ, ಎನ್ಟಿಸಿಪಿ ಸಾಮಾಜಿಕ ಕಾರ್ಯಕರ್ತ ರವಿರಾಜ್, ಎನ್.ಟಿ.ಪಿ.ಸಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಓ.ಮಲ್ಲಪ್ಪ, ಎನ್.ಟಿಸಿಪಿ ಜಿಲ್ಲಾ ಸಲಹೆಗಾರ ಹೇಮಂತರಾಜ್ ಅರಸ್, ಐಪಿಎಚ್ ಯೋಜನಾಧಿಕಾರಿ ಎನ್.ಜಿ.ಅಚ್ಯುತ್ ಉಪಸ್ಥಿತರಿದ್ದರು.
ಶಾಲಾ, ಕಾಲೇಜು ಆವರಣದಲ್ಲಿ ತಂಬಾಕು, ಸಿಗರೇಟ್ ಮಾರಾಟ, ಶಿವಮೊಗ್ಗದಲ್ಲಿ ಬಿದ್ದ ದಂಡವೆಷ್ಟು ಗೊತ್ತಾ?