ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಫ್.ಡಿ.ಎ ಆಗಿ ಕಾರ್ಯನಿರ್ವಹಿಸುತ್ತಿರುವ ಗಿರಿರಾಜ್ ಅವರು ನಾಪತ್ತೆಯಾಗಿ 30 ಗಂಟೆ ಮೇಲಾದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪೊಲೀಸ್ ಇಲಾಖೆಯಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದ್ದು, ನಿನ್ನೆಯಿಂದ ಶೋಧ ಕಾರ್ಯ ನಡೆಯುತ್ತಿದೆ.
ಕಚೇರಿಯಲ್ಲಿ ಕಾರ್ಯದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದಾಗಿ ಡೆತ್ ನೋಟ್ ಅನ್ನು ಬರೆದು ಸಿಬ್ಬಂದಿ, ಡಿಸಿ ಅವರಿಗೆ ಕಳುಹಿಸಿ ನಾಪತ್ತೆಯಾಗಿದ್ದಾರೆ.
READ | ಡೆತ್ ನೋಟ್ ಬರೆದಿಟ್ಟು ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆ, ಕಾರಣವೇನು?
ಪೊಲೀಸ್ ಮೂಲಗಳು ಪ್ರಕಾರ, ಮಂಗಳವಾರ ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಬಂದಿದ್ದ ಗಿರಿರಾಜ್ ಅವರ ಮೊಬೈಲ್ ನೆಟ್ವರ್ಕ್ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಶಿವಮೊಗ್ಗ ಬುದ್ಧನಗರದಲ್ಲಿ ಪತ್ತೆಯಾಗಿದ್ದು, 9 ಗಂಟೆಯ ಆಸುಪಾಸಿಗೆ ವಾಟ್ಸಾಪ್ ನಲ್ಲಿ ಡೆತ್ ನೋಟ್ ಕಳುಹಹಿಸಿದ್ದಾರೆ. ನಂತರ ಭದ್ರಾವತಿಯಲ್ಲಿ ಮೊಬೈಲ್ ಕೊನೆಯದಾಗಿ ಸ್ವಿಚ್ ಆಫ್ ಆಗಿದೆ. ಅದರ ಆಧಾರದ ಮೇಲೆ ಶೋಧ ಕಾರ್ಯ ನಡೆಯುತ್ತಿದೆ.
ಎಲ್ಲೆಲ್ಲಿ ಶೋಧ ಕಾರ್ಯ ನಡೆಯುತ್ತಿದೆ?
ಭದ್ರಾವತಿಯ ಉದ್ಧವ್ ಆಂಜನೇಯ ಸ್ವಾಮಿ ದೇವಸ್ಥಾನ, ಅಂತರಗಂಗೆ, ಎರೇಹಳ್ಳಿ, ಅಡ್ಲಘಟ್ಟ, ಮಾವಿನಕೆರೆಯಲ್ಲಿ ನಿನ್ನೆ ಹುಡುಕಾಟ ಮಾಡಲಾಗಿದೆ. ಇಂದು ಬೆಳಗ್ಗೆಯಿಂದಲೇ ಮತ್ತೆ ಶೋಧ ಕಾರ್ಯ ಶುರುವಾಗಿದೆ. ಮಾರುತಿನಗರದಿಂದ ಬಾರಂದೂರು ಗ್ರಾಮದವರೆಗಿನ ರೈಲ್ವೆ ಟ್ರ್ಯಾಕ್ ಮೇಲೆಯೂ ಹುಡುಕಾಟ ನಡೆಸಲಾಗಿದೆ.
ಗಿರಿರಾಜ್ ಅವರು ಶಿವಮೊಗ್ಗದಿಂದ ಭದ್ರಾವತಿಗೆ ಹೇಗೆ ಹೋದರು, ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ ಮೂಲಕ ಪ್ರಯಾಣಿಸಿದರೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಇದುವರೆಗೆ ಉತ್ತರ ಸಿಕ್ಕಿಲ್ಲ. ಭದ್ರಾವತಿಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಅದರ ಪಕ್ಕವೇ ಹೊಳೆ ಇದ್ದು, ಯಾವ ಕಡೆ ಹೋಗಿದ್ದಾರೆ ಎಂಬುವುದು ಗೊತ್ತಾಗಿಲ್ಲ. ಹೀಗಾಗಿ, ಪ್ರಕರಣದ ಪ್ರತಿಯೊಂದು ಅಂಶಗಳ ಮೇಲೆಯೂ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.
ಯಾರ್ಯಾರ ಹೇಳಿಕೆ ದಾಖಲು
ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಚಾಲಕರು, ನಿರ್ವಾಹಕರಿಗೆ ಭೇಟಿಯಾಗಿ ಅವರು ಸಂಚರಿಸಿದ್ದಾರೆಯೇ ಎಂಬುವುದನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ, ಕುಟುಂಬದವರೊಂದಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಅವರು ಏನೇನು ಮಾತನಾಡಿದ್ದಾರೆ, ಆತ್ಮಹತ್ಯೆಯ ಬಗ್ಗೆ ಸುಳಿವೇನಾದರೂ ನೀಡಿದ್ದರಾ ಎಂಬುವುದನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ, ಕಚೇರಿಯಲ್ಲಿ ಯಾರ ಜೊತೆಗೆ ಹೆಚ್ಚು ಸಂಪರ್ಕ ಹೊಂದಿದ್ದರೋ ಅವರ ಹೇಳಿಕೆಗಳನ್ನು ಪಡೆಯಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
https://www.suddikanaja.com/2020/11/13/young-woman-slipped-into-the-tunga-river-by-a-moving-janshatabdi-train/