ಸುದ್ದಿ ಕಣಜ.ಕಾಂ | KARNATAKA | MADB
ಶಿವಮೊಗ್ಗ: ಮಲೆನಾಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರಿಗೆ ಹೆಚ್ಚುವರಿ ಅನುದಾನ ಮತ್ತು ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಮಂಡಳಿಯ ಸರ್ವ ಸದಸ್ಯರ ಸಾಮಾನ್ಯ ಸಭೆ ತೀರ್ಮಾನಿಸಲಾಗಿದೆ.
https://www.suddikanaja.com/2021/09/02/provident-fund-e-nomination-process-has-been-started/
ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ(ಎಂಎಡಿಬಿ)ಯ ಸಭಾಂಗಣದಲ್ಲಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ 2021-22 ನೇ ಸಾಲಿನ ಪ್ರಥಮ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಕೆ.ಎಸ್.ಗುರುಮೂರ್ತಿ, ರಾಜ್ಯದ 13 ಜಿಲ್ಲೆಗಳು ಮಂಡಳಿ ವ್ಯಾಪ್ತಿಗೆ ಒಳಪಟ್ಟಿವೆ. 86 ಶಾಸಕರು, 12 ಸಂಸದರು, 13 ಜಿಲ್ಲಾ ಪಂಚಾಯಿತಿ ಸದಸ್ಯರು, 10 ನಾಮ ನಿರ್ದೇಶಿತ ಸದಸ್ಯರು, ಒಬ್ಬ ಕಾರ್ಯದರ್ಶಿ ಹಾಗೂ 13 ಜಿಲ್ಲಾಧಿಕಾರಿಗಳನ್ನು ಒಳಗೊಂಡ ದೊಡ್ಡ ಮಂಡಳಿ ಇದಾಗಿದೆ. ಮಲೆನಾಡಿನ ಅಭಿವೃದ್ದಿ ಕುರಿತು ಶಾಸಕರು ನೀಡಿದ ಕ್ರಿಯಾ ಯೋಜನೆಗಳನ್ನು ಸರ್ಕಾರ ಅನುಮೋದಿಸಿ, ಮಲೆನಾಡು ವ್ಯಾಪ್ತಿಯ ಇತರೆ ಅನುಷ್ಠಾನ ಇಲಾಖೆಗಳಿಂದ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಎಂಎಡಿಬಿಗೆ ಅನುದಾನದ ಕೊರತೆ
ಪ್ರತಿ ಶಾಸಕರಿಗೆ ತಲಾ ₹1 ಕೋಟಿ ಅನುದಾನ ನಿಗದಿಯಾಗಿದ್ದರೂ ಹಲವು ವರ್ಷಗಳಿಂದ ₹30 ರಿಂದ 40 ಲಕ್ಷ ಬಿಡುಗಡೆಯಾಗುತ್ತಿದೆ. ಇಷ್ಟು ದೊಡ್ಡ ಮಂಡಳಿಗೆ ವಾರ್ಷಿಕ ₹25 ರಿಂದ 26 ಕೋಟಿ ಅನುದಾನ ಸಾಕಾಗುತ್ತಿಲ್ಲ. ಬಾಕಿ ಕಾಮಗಾರಿಗಳಿಗೆ ಇನ್ನೂ ₹30 ಕೋಟಿ ಕೊರತೆ ಇದೆ ಎಂದು ಗುರುಮೂರ್ತಿ ಹೇಳಿದರು.
ಸದಸ್ಯರು ತಮಗೆ ನಿಗದಿಪಡಿಸಿದ ಅನುದಾನವನ್ನು ₹1.5 ಕೋಟಿಗೆ ಹೆಚ್ಚಿಸುವಂತೆ ಹಾಗೂ ನಾಮ ನಿರ್ದೇಶಿತ ಸದಸ್ಯರು ತಮಗೂ ₹1 ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ. ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ ಮುಂದಿನ ಅಧಿವೇಶನದ ಒಳಗೆ ಸಭೆ ಕರೆದು ಸದಸ್ಯರಿಗೆ ಹೆಚ್ಚುವರಿ ಅನುದಾನ, ಬಾಕಿ ಕಾಮಗಾರಿ ಪೂರ್ಣಕ್ಕೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
https://www.suddikanaja.com/2021/01/07/karnataka-biodiversity-board-chairman-meet-cm-yadiyurappa/
ಸದಸ್ಯರು ಏನೇನು ಹೇಳಿದರು?
ಸದಸ್ಯ ರಾಜುಗೌಡ ಮಾತನಾಡಿ, ಹಲವು ಹಳೆಯ ಕಾಮಗಾರಿಗಳು ಬಾಕಿ ಇವೆ. ಸಾರ್ವಜನಿಕರ ಅಭಿವೃದ್ದಿ ಕೆಲಸ ಮಾಡಲು ಇನ್ನೂ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಪ್ರತಿ ಸದಸ್ಯರಿಗೆ ₹1.5 ಕೋಟಿ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧ್ಯಕ್ಷರನ್ನು ಆಗ್ರಹಿಸಿದರು.
ಸದಸ್ಯರಾದ ಭೋಜೇಗೌಡ ಮಾತನಾಡಿ, ಮಂಡಳಿ ಕಾಮಗಾರಿ ಕೈಗೊಳ್ಳುವಾಗ ಜಿಎಸ್ಟಿ, ಲೇಬರ್ ಸೆಸ್, ರಾಯಲ್ಟಿ, ಸೇವಾ ತೆರಿಗೆ ಸೇರಿದಂತೆ ಅನುಷ್ಠಾನ ಸಂಸ್ಥೆಗಳಿಗೆ ಶೇ.25 ರಷ್ಟು ಖರ್ಚಾಗುತ್ತದೆ. ಉಳಿದ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಅನಿವಾರ್ಯತೆ ಇದೆ. ಆದಕಾರಣ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.
ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಅಂಡಿಗೆ, ಮಹಾದೇವಪ್ಪ ಮಾತನಾಡಿ, ತಮಗೂ ತಲಾ ₹1 ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿದರು.
ಎಂಎಡಿಬಿ ಕಾಮಗಾರಿಗಳ ಸ್ಟೇಟಸ್
2020-21 ನೇ ಸಾಲಿನಲ್ಲಿ (2012-13 ರಿಂದ 2019-20 ನೇ ಸಾಲಿನವರೆಗೆ) ಮುಂದುವರಿದ ಕಾಮಗಾರಿಗಳು ಸೇರಿ 1,397 ಕಾಮಗಾರಿಗಳನ್ನು ಮಂಡಳಿ ವತಿಯಿಂದ ಕೈಗೆತ್ತಿಕೊಂಡಿದ್ದು, ಇದರಲ್ಲಿ 854 ಕಾಮಗಾರಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಗುರುಮೂರ್ತಿ ಹೇಳಿದರು.
https://www.suddikanaja.com/2021/05/14/shivamogga-airport-will-complete-within-8-months/
ಉತ್ತಮ ಆರ್ಥಿಕ ಪ್ರಗತಿ
2020-21 ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಬಳಕೆಯಾಗದ ₹310.50 ಲಕ್ಷದ ಒಟ್ಟು 46 ಕಾಮಗಾರಿಗಳನ್ನು ಹೊರತು ಯಾವುದೇ ಹೊಸ ಕಾಮಗಾರಿ ಕೈಗೆತ್ತಿಕೊಂಡಿರುವುದಿಲ್ಲ. ಆದಾಗ್ಯೂ ಮುಂದುವರಿದ ಕಾಮಗಾರಿಗಳು ಹಾಗೂ 46 ಹೊಸ ಕಾಮಗಾರಿಗಳು ಸೇರಿ ಒಟ್ಟಾರೆ ₹516.04 ಲಕ್ಷ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ.
2021-22 ನೇ ಸಾಲಿನಲ್ಲಿ 652 ಮುಂದುವರಿದ ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರ ಅನುಮೋದನೆ ನೀಡಿದ್ದು, ಆಗಸ್ಟ್ ಅಂತ್ಯಕ್ಕೆ 112 ಕಾಮಗಾರಿ ಪೂರ್ಣಗೊಳಿಸಿ ₹747.52 ಲಕ್ಷ ವೆಚ್ಚ ಭರಿಸಲಾಗಿದೆ. ಬಾಕಿ 540 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು ಎಲ್ಲ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪುರ್ಣಗೊಳಿಸುವಂತೆ ಗಡುವು ನೀಡಲಾಗಿದೆ ಎಂದರು.
ಸಭೆಯಲ್ಲಿ ಮಾಯಕೊಂಡ ಕ್ಷೇತ್ರದ ವಿಧಾನಸಭಾ ಸದಸ್ಯ ಪ್ರೊ.ಲಿಂಗಣ್ಣ, ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ಶಾಸಕರು, ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಇತರೆ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮಂಡಳಿಯ ಕಾರ್ಯದರ್ಶಿ ಕೆ.ಎಸ್.ಮಣಿ ಉಪಸ್ಥಿತರಿದ್ದರು.
https://www.suddikanaja.com/2021/01/10/sagar-mla-halapa-spoke-about-sharavathi-victims-problem-at-edigara-bhavana-shimoga/