ಸುದ್ದಿ ಕಣಜ.ಕಾಂ | DISTRICT | TOURISM
ಶಿವಮೊಗ್ಗ: ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಕೊಂಚ ರಿಲೀಫ್ ನೀಡಲಾಗಿದೆ. ಸೆಪ್ಟೆಂಬರ್ 15ರಿಂದಲೇ ಅನ್ವಯ ಆಗುವಂತೆ ನಿಯಮ ಜಾರಿಗೆ ತರಲಾಗಿದೆ.
ಏನು ಹೊಸ ನಿಯಮ?
ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಜಿಲ್ಲಾಡಳಿತವು ಜೋಗ ಜಲಪಾತಕ್ಕೆ ಬರುವವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ, ಈ ನಿಯಮ ಸಡಿಲಗೊಳಿಸಲಾಗಿದೆ.
ಇನ್ಮುಂದೆ ಜೋಗಕ್ಕೆ ಬರಬೇಕಾದರೆ ಕನಿಷ್ಠ ಒಂದು ಲಸಿಕೆಯಾದರೂ ಪಡೆದಿರಲೇಬೇಕು. ಅದರ ಪ್ರಮಾಣ ಪತ್ರ ತೋರಿಸಿದರೆ ಮಾತ್ರ ಜೋಗ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಇಲ್ಲದಿದ್ದರೆ ವಾಪಸ್ ತೆರಳಬೇಕಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ತಿಳಿಸಿದ್ದಾರೆ.
ನೆಗೆಟಿವ್ ವರದಿಯಿಂದಾಗಿ ನಿತ್ಯ ಕಿರಿಕಿರಿ
ಉತ್ತರ ಕನ್ನಡ ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಹೋಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಪ್ರವಾಸಿಗರಿಗೆ ನೆಗೆಟಿವ್ ರಿಪೋರ್ಟ್ ಕೇಳುತ್ತಿದ್ದ ಕಾರಣದಿಂದಾಗಿ ವಾರಾಂತ್ಯಗಳಲ್ಲಿ ಜಗಳವಾಗುತಿತ್ತು. ಇದೇ ಪ್ರಕರಣ ಸಂಬಂಧಪಟ್ಟಂತೆ ಅಲ್ಲಿಯ ಗುತ್ತಿಗೆ ನೌಕರರನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಇನ್ಮುಂದೆ ಲಸಿಕೆ ಪಡೆದ ಪ್ರಮಾಣ ಪತ್ರ ಇದ್ದರೆ ಸಾಕು ಜೋಗ ದರ್ಶನ ಭಾಗ್ಯ ಪ್ರಾಪ್ತವಾಗಲಿದೆ. ಅದನ್ನು ಜೋಗದ ಪ್ರವೇಶ ದ್ವಾರದಲ್ಲಿಯೇ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಬರುವ ವೀಕೆಂಡ್ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಸಾಧ್ಯತೆ
ಕಟ್ಟುನಿಟ್ಟಿನ ನಿಯಮಗಳಿಂದಾಗಿ ವಾರಾಂತ್ಯಗಳಲ್ಲಿ ಜೋಗಕ್ಕೆ ಬರುವವರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಆದರೆ, ಈಗ ಸಡಿಲೀಕರಣ ನೀಡಿರುವುದರಿಂದ ಬರುವ ವೀಕೆಂಡ್ ಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.