ಸುದ್ದಿ ಕಣಜ.ಕಾಂ | TALUK | SPECIAL STORY
ಸಾಗರ: ರಾಜಕೀಯವಾಗಿ ಶಿವಮೊಗ್ಗ ಪ್ರಭಾವಿ ಜಿಲ್ಲೆ. ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿ ಕಳುಹಿಸಿದ ಹೆಮ್ಮೆಯ ಕ್ಷೇತ್ರ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿ ಆಯ್ಕೆಯಾಗಿ ಅಭಿವೃದ್ಧಿಯನ್ನು ಕಾಣುತ್ತಿರುವ ಜಿಲ್ಲಾ ಕೇಂದ್ರ ಒಂದೆಡೆಯಾದರೆ, ರಾತ್ರಿಯಾದರೆ ಸಾಕು `ಅಜ್ಞಾತ’ ಬದುಕು ಸಾಗಿಸಬೇಕಾದ ಅನಿವಾರ್ಯತೆ ಇನ್ನೊಂದೆಡೆ ಇದೆ.
ಸುಮಾರು 25 ಸಾವಿರ ಜನಸಂದಣಿ ಇರುವ ತುಮರಿಯಂತಹ ಭೌಗೋಳಿಕ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಅಸಡ್ಡೆತನ ತೋರುತ್ತಿದೆ. ಇದರಿಂದಾಗಿ, ದ್ವೀಪದ ಜನರಿಗೆ ಸಂಜೆ ಲಾಂಚ್ ಸೇವೆ ಮುಗಿದ ನಂತರ ಯಾವುದೇ ತುರ್ತು ಸೇವೆ ಸಕಾಲಕ್ಕೆ ಸಿಗುವುದಿಲ್ಲ. ಸರ್ಕಾರ ನೀಡಿರುವ ಆಂಬ್ಯುಲೆನ್ಸ್ ಕೂಡ ಸುಸ್ಥಿತಿಯಲ್ಲಿಲ್ಲ. ಇದಕ್ಕೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ.
ರಾತ್ರಿ 9.15ರ ವೇಳೆಗೆ ಆಂಬ್ಯುಲೆನ್ಸ್ ಗಾಗಿ ಪ್ರಯತ್ನ ಮಾಡಿದೆವು. ನೇಟ್ವರ್ಕ್ ಸಮಸ್ಯೆಯಿಂದ ತುರ್ತು ಆರೋಗ್ಯ ಸೇವೆ ಲಭ್ಯವಾಗಲಿಲ್ಲ. ಸರಿಯಾದ ಆಂಬ್ಯುಲೆನ್ಸ್ ಕಲ್ಪಿಸುವ ಕಡೆಗೆ ಶಾಸಕರು ಗಮನ ಹರಿಸಬೇಕು.
– ಅಣ್ಣಪ್ಪ ಹೊಸಮನೆ, ಸಂಕಷ್ಟಕ್ಕೆ ಒಳಗಾದವರು
ನೆಟ್ವರ್ಕ್, ಆಂಬ್ಯುಲೆನ್ಸ್ ಸಿಗಲಿಲ್ಲ
ತಡರಾತ್ರಿ ಚನ್ನಗೊಂಡ ಗ್ರಾಮದ ಅಣ್ಣಪ್ಪ ಹೊಸಮನೆ ಎಂಬುವವರ ಪತ್ನಿ ಚೈತ್ರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ವತ್ರೆಗೆ ಸಾಗಿಸುವುದಕ್ಕಾಗಿ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ, ನೇಟ್ವರ್ಕ್ ಇಲ್ಲದೇ 6 ಕಿ.ಮೀ. ದೂರದಲ್ಲಿರುವ ಸುಳ್ಳಳ್ಳಿಗೆ ಬಂದು ಕರೆ ಮಾಡಿದಾಗ ಅಲ್ಲಿಯೂ ಸಂಪರ್ಕ ಸಾಧ್ಯವಾಗಿಲ್ಲ. ನಂತರ, ಖಾಸಗಿ ವಾಹನದ ಮೊರೆ ಹೋಗಿದ್ದಾರೆ. ಈ ನಡುವೆ ಗಣೇಶ್ ಹಾರಿಗೆ, ಬ್ಯಾಕೋಡು ಠಾಣೆಯ ರಂಜಿತ್ ಅವರ ಸಹಕಾರದಿಂದ ಚನ್ನಗೊಂಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯ್ ಕುಮಾರ್ ಅವರ ವಾಹನದಲ್ಲಿ ಸಾಗರದ ಅಸ್ವತ್ರೆಗೆ ಹೋಗುವ ಸಲುವಾಗಿ ಹೊಸಮನೆ ಗ್ರಾಮದಿಂದ ಸುಳ್ಳಳ್ಳಿ ಮಾರ್ಗವಾಗಿ ಆಸ್ವತ್ರೆಗೆ ದಾಖಲಿಸಲು ತೆರಳುವಾಗ ತೀವ್ರ ಹೆರಿಗೆ ನೋವಿನಿಂದ ಕಟ್ಟಿನಕಾರು ಮಾರ್ಗ ಮಧ್ಯೆ ಖಾಸಗಿ ವಾಹನದಲ್ಲೇ ಗರ್ಭಪಾತವಾಗಿದೆ. ತದನಂತರ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ಯಾಕೋಡಿಗೆ ದಾಖಲಿಸಿದ್ದಾರೆ. ರಾಜೇಶ್ವರಿ ಸಿಬ್ಬಂದಿ ಮಂಗಳ, ವೀಣಾ, ಚೈತ್ರಾ, ಆಶಾ ಸಹಕಾರದಿಂದ ಪ್ರಥಮ ಚಿಕಿತ್ಸೆ ಬ್ಯಾಕೋಡು ಅಸ್ವತ್ರೆಯಲ್ಲಿ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ತುಮರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಮತ್ತೆ 108 ಸೇವೆಗೆ ಮತ್ತೆ ಪುನಃ ಕರೆ ಮಾಡಿದಾಗ ಆಂಬ್ಯುಲೆನ್ಸ್ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ವಿಳಂಬದ ನಂತರ ಬಂದಿದ್ದು, ವಾಹನದ ಸ್ಥಿತಿ ಸರಿಯಾಗಿರಲಿಲ್ಲ. ಈ ಎಲ್ಲ ಬೆಳವಣಿಗೆಗಳ ಬಳಿಕವೂ ಅದೃಷ್ಟವಶಾತ್ ತಾಯಿ ಹಾಗೂ ಮಗು ಆರೋಗ್ಯ ವಾಗಿದ್ದಾರೆ. ಆದರೆ, ಇಂಥಹ ಘಟನೆಗಳು ಪದೇ ಪದೆ ಈ ಭಾಗದಲ್ಲಿ ಮರುಕಳಿಸುತ್ತಿವೆ.
ಸ್ಥಳೀಯ ಶಾಸಕರು, ಜಿಲ್ಲಾಡಳಿತ ಇದರೆಡೆಗೆ ಗಮನಹರಿಸಬೇಕು. ರಾಜ್ಯಪಾಲರಿಗೆ ಪತ್ರ ಚಳವಳಿ ಫಲವಾಗಿ ಸರ್ಕಾರ ಅಂಬುಲೆನ್ಸ್ ಸೇವೆ ಲಭ್ಯವಾಗಿದೆ. ಆದರೆ, ಈಗ ಅದರ ಸ್ಥಿತಿಯೂ ಗಂಭೀರವಾಗಿದೆ. ಕೂಡಲೇ ಜಿಲ್ಲಾಡಳಿತ ನೆಟ್ವರ್ಕ್ ಸಮಸ್ಯೆ ಹಾಗೂ ಆರೋಗ್ಯ ತುರ್ತು ಸೇವೆ ನೀಡುವುದರ ಕಡೆಗೆ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ: ಎಂ.ಸುಕುಮಾರ್
https://www.suddikanaja.com/2021/08/07/home-minister-portfolio-to-aaraga-jnanedra/