ಸುದ್ದಿ ಕಣಜ.ಕಾಂ | DISTRICT | CYBER CRIME
ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಅವರ ಅಧಿಕೃತ ಆಪ್ತ ಸಹಾಯಕ ಎಂದು ಹೇಳಿಕೊಂಡು ಇಬ್ಬರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಮೈಸೂರಿನ ಹೆಬ್ಬಾಳ ನಿವಾಸಿ ಸಿವಿಲ್ ಎಂಜಿನಿಯರ್ ಒಬ್ಬರಿಗೆ ಮೈಸೂರಿನಲ್ಲಿ ಅವರ ವಿಲ್ಲಾ ಪ್ರಾಜೆಕ್ಟ್ ಗೆ ₹100 ಕೋಟಿ ಲೋನ್ ಕೊಡಿಸುವುದಾಗಿ ನಂಬಿಸಿ ₹10 ಲಕ್ಷ ಪಡೆದುಕೊಳ್ಳಲಾಗಿದೆ. ಅದೇ ರೀತಿ, ಸಾಗರದ ಬರೂರಿನ ವಾಸಿಯೊಬ್ಬರಿಗೆ ಬೆಂಗಳೂರಿನಲ್ಲಿ 106 ಆರೋ ವಾಟರ್ ಪ್ಲಾಂಟ್ ಕೊಡಿಸುವುದಾಗಿ ನಂಬಿಸಿ ₹26.25 ಲಕ್ಷ ಪಡೆದು ಇಬ್ಬರಿಗೂ ವಂಚನೆ ಮಾಡಲಾಗಿದೆ.
ಈ ಹಣವನ್ನು ವಾಪಸ್ ಕೇಳಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಪ್ರತ್ಯೇಕವಾಗಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಐಪಿಸಿ ಕಲಂ 506, 419, 420 ಅಡಿಯಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ.
ಐವರ ವಿರುದ್ಧ ಪ್ರಕರಣ ದಾಖಲು
ಪ್ರಕರಣ ಸಂಬಂಧಿಸಿದಂತೆ ಒಟ್ಟು ಐದು ಜನರ ಮೇಲೆ ಪ್ರಕರಣ ದಾಖಲಾಗಿದೆ. ಅದರಲ್ಲಿ ನಾಲ್ವರು ಶಿವಮೊಗ್ಗದವರಾಗಿದ್ದು, ಒಬ್ಬರು ದಕ್ಷಿಣ ಕನ್ನಡದವರಾಗಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.