ಸುದ್ದಿ ಕಣಜ.ಕಾಂ | CITY | SHIVAMOGGA DASARA
ಶಿವಮೊಗ್ಗ: ‘ಶಿವಮೊಗ್ಗ ದಸರಾ‘ ಎಂದರೆ ಜಂಬೂ ಸವಾರಿಯೇ ಆಕರ್ಷಣೆಯ ಕೇಂದ್ರ. ಆದರೆ, ಈ ಸಲ ಅದೇ ಇಲ್ಲ!
ಹೌದು, ಮಹಾನಗರ ಪಾಲಿಕೆಯು ಕಳೆದ ಏಳು ದಿನಗಳಿಂದ ಅದ್ಧೂರಿ ದಸರಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿವಿಧ ಸ್ಪರ್ಧೆಗಳು ಹಲವೆಡೆ ನಡೆಯುತ್ತಿವೆ. ಆದರೆ, ಅಕ್ಟೋಬರ್ 15ರಂದು ನಡೆಯಬೇಕಿರುವ ಜಂಬೂ ಸವಾರಿಗೆ ಈ ಸಲ ಬ್ರೇಕ್ ಬಿದ್ದಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಾಡಹಬ್ಬ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಆನೆಗಳನ್ನು ನೀಡುವಂತೆ ಕೋರಿದ್ದಾರೆ. ಅದರಂತೆ, ಸಕ್ರೆಬೈಲು ಆನೆಬಿಡಾರದಿಂದ ಎರಡು ಪಳಗಿದ ಆನೆಗಳನ್ನು ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶದಲ್ಲಿ ತಿಳಿಸಿದ್ದಾರೆ.
ಆದರೆ, ಆದೇಶದಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸಿದ್ದು, ದಸರಾ ಉತ್ಸವ ಸಮಿತಿ ಅದನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಲೇಬೇಕಾಗುತ್ತದೆ.
READ | ಸಕ್ರೆಬೈಲು ಆನೆಬಿಡಾರದಲ್ಲಿ ಹಬ್ಬವೋ ಹಬ್ಬ, ಶಿವಮೊಗ್ಗ ದಸರಾದಲ್ಲಿ ಭಾಗವಹಿಸಲಿವೆ 2 ಆನೆ
ಆದೇಶ ಪ್ರತಿಯಲ್ಲಿರುವ ನಿಬಂಧನೆಗಳೇನು?
- ಕಾರ್ಯಕ್ರಮಕ್ಕೆ ಪಳಗಿಸಿದ ಆನೆಗಳನ್ನು ಒದಗಿಸುವಾಗ ವನ್ಯಜೀವಿ (ಸಂರಕ್ಷಣಾ) ಕಾಯದೆ 1972 ಹಾಗೂ ಅದರಡಿ ಬರುವ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸತಕ್ಕದ್ದು.
- ಆನೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ವಲಯ ಅರಣ್ಯಾಧಿಕಾರಿಗಳ ಮಟ್ಟದ ಅಧಿಕಾರಿಯನ್ನು ನಿಯೋಜಿಸತಕ್ಕದ್ದು.
- ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಆನೆಗಳನ್ನು ಕೇವಲ ಪೂಜೆಗೆ ಮಾತ್ರ ಬಳಸಬೇಕು. ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಬಾರದು.
- ಆನೆಗಳನ್ನು ಬಳಸಿಕೊಂಡು ಕಾರ್ಯಕ್ರಮ ನಡೆಸುವಾಗ ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ಆಯೋಜಕರೇ ಅದರ ಪೂರ್ಣ ಹೊಣೆ ಹೊರಬೇಕಾಗುತ್ತದೆ.
ಶಿವಮೊಗ್ಗ ನಗರಕ್ಕೆ ಬರಲಿವೆ 2 ಆನೆ
ಶಿವಮೊಗ್ಗ ದಸರಾ ಪ್ರಯುಕ್ತ ಎರಡು ಆನೆಗಳು ನಗರಕ್ಕೆ ಆಗಮಿಸಲಿವೆ. ಅವುಗಳಿಗೆ ಸಂಪ್ರದಾಯದ ಪ್ರಕಾರ ಸ್ವಾಗತಿಸಿ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನು ಮಹಾನಗರ ಪಾಲಿಕೆ ಪೂರೈಸಲಿದೆ. ಆದರೆ, ಆನೆಬಿಡಾರದಿಂದ ಕರೆದುಕೊಂಡು ಬರಲಿರುವ ಸಾಗರ ಮತ್ತು ಭಾನುಮತಿ ಆನೆಯನ್ನು ಎರಡು ದಿನಗಳ ಕಾಲ ಪೂಜೆಗೋಸ್ಕರ ಮಾತ್ರ ಬಳಸಿ ನಂತರ ಅವುಗಳನ್ನು ವಾಪಸ್ ಕ್ಯಾಂಪ್ ಗೆ ಕಳುಹಿಸಲಾಗುವುದು.
ವಾಹನದಲ್ಲಿ ಕೊಂಡೊಯ್ಯಲಿದ್ದಾರೆ ಅಂಬಾರಿ
ಜಂಬೂ ಸವಾರಿ ಮಾಡಲು ಅವಕಾಶ ಇಲ್ಲದೇ ಇರುವುದರಿಂದ ಅಂಬಾರಿಯನ್ನು ಕಳೆದ ವರ್ಷದಂತೆಯೇ ವಾಹನದಲ್ಲಿಟ್ಟುಕೊಂಡು ಹೋಗಲಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕೃತ ಮೂಲಗಳೇ ಸ್ಪಷ್ಟಪಡಿಸಿವೆ.
ಖೆಡ್ಡಾ ಆಪರೇಷನ್ ನಲ್ಲಿ ಸೆರೆ ಸಿಕ್ಕ ರಾಜ್ಯದ ಹಿರಿಯ ಹೆಣ್ಣಾನೆ ಸಾವು, ಏನಾಗಿತ್ತು ಗೊತ್ತಾ?