ಸುದ್ದಿ ಕಣಜ.ಕಾಂ | DISTRICT | DC VISIT
ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಾಲೂಕಿನ ಗಾಜನೂರು ಗ್ರಾಮಕ್ಕೆ ಭೇಟಿ ನೀಡಿದ್ದು, ಶನಿವಾರ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಪ್ರಯುಕ್ತ ಗಾಜನೂರಿಗೆ ಭೇಟಿ ನೀಡಿದ್ದು, ಶಿಕ್ಷಣ, ಮೂಲಸೌಕರ್ಯ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅವುಗಳಿಗೆ ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.
ಡಿಸಿ ಶಿವಕುಮಾರ್ ಅವರನ್ನು ಗ್ರಾಮಕ್ಕೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ನಂತರ ಗ್ರಾಮದ ವಿವುಧೆಡೆ ಭೇಟಿ ನೀಡಿದರು. ದೇವರ ದರ್ಶನ ಪಡೆದ ನಂತರ ಗಾಜನೂರಿನ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದರು.
ಮುಖ್ಯೋಪಾಧ್ಯಾಯರಿಗೆ ಸೂಚನೆ
ಶಾಲೆಯಲ್ಲಿ ನಿರೀಕ್ಷಿತ ಫಲಿತಾಂಶ ಕಾಣದಾಗಿದ್ದು, ಅಲ್ಲಿನ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು ಫಲಿತಾಂಶವನ್ನು ಹೆಚ್ಚಿಸಲು ಅಗತ್ಯವಿರುವ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ನಿರೀಕ್ಷಿತ ಫಲಿತಾಂಶ ತರುವಲ್ಲಿ ಶಾಲೆಯ ಎಲ್ಲ ಶಿಕ್ಷಕ ಕೌಶಲವನ್ನು ಬಳಸುವಂತೆ ಹಾಗೂ ವಿಶೇಷ ತರಗತಿಗಳನ್ನು ನಡೆಸಬೇಕು. ನಿಗದಿಪಡಿಸಿದ ಅವಧಿಯೊಳಗಾಗಿ ಪಠ್ಯ ವಿಷಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಶಿಕ್ಷಕರು ಕೈಗೊಳ್ಳುವ ಪಠ್ಯ ಚಟುವಟಿಕೆಗಳಿಗೆ ಪೂರಕವಾಗಿ ಪೋಷಕರು ಅಗತ್ಯ ಸಹಕಾರ ನೀಡಬೇಕು. ಶಾಲೆಯಲ್ಲಿ ಪಾಠೋಪಕರಣ, ಪೀಠೋಪಕರಣ, ಅಕ್ಷರದಾಸೋಹ, ಕೊಠಡಿಗಳು ಮುಂತಾದವುಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು.
ಮಕ್ಕಳನ್ನು ಮಾದಕ ವಸ್ತುಗಳಿಂದ ದೂರವಿಡಬೇಕು. ಅನುಮಾನಗಳು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿದಾರರ ಪರಿಚಯವನ್ನು ಗೌಪ್ಯವಾಗಿ ಇಡಲಗುವುದು ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಗಮನಹರಿಸಲಾಗುವುದು. ಇರುವ ನೀರಿನ ಘಟಕಕ್ಕೆ ಫಿಲ್ಟರ್ ಅಳವಡಿಸಲು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈ ಗ್ರಾಮವನ್ನು ಅಳವಡಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಗ್ರಾಮ ಠಾಣಗಳಲ್ಲಿ ಹಲವು ದಶಕಗಳಿಂದ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಕುಟುಂಬದ ಸದಸ್ಯರಿಗೆ ಹಕ್ಕುಪತ್ರ ನೀಡಲು ಇರಬಹುದಾದ ಅಡ್ಡಿ ಆತಂಕಗಳ ಬಗ್ಗೆ ಮುಂದಿನ ವಾರ ನಡೆಯಲಿರುವ ಕಂದಾಯಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗ್ರಾಮ ಠಾಣ ಸರ್ವೇ ಕಾರ್ಯ ಪೂರ್ಣಗೋಳಿಸಿ ಮಾಹಿತಿ ನೀಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಅಹವಾಲುಗಳ ಮಹಪೂರ
ಸಭೆಯಲ್ಲಿ ಗ್ರಾಮದ ನಿವಾಸಿಗಳ ಮನೆಗಳಿಗೆ ಹಕ್ಕುಪತ್ರ ನೀಡಿ, ಕುಡಿಯುವ ನೀರಿನ ಘಟಕಕ್ಕೆ ಫಿಲ್ಟರ್ ಅಳವಡಿಸಿ, ಪ್ರತ್ಯೇಕ ನಾಡಕಚೇರಿ ಕೇಂದ್ರ ಆರಂಭಿಸಿ, ಕುಡಗಲಮನೆ ಸಣ್ಣ ಗ್ರಾಮದ ನಿವಾಸಿಗಳಿರುವಲ್ಲೆ ಪಡಿತರ ವಿತರಿಸಿ, ಹೊನ್ನಾಪುರ ಗ್ರಾಮದ ರಸ್ತೆಗಳನ್ನು ಸರಿಪಡಿಸಿ, ಪಿ.ಯು.ಕಾಲೇಜು ಆರಂಭಿಸಿ, ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ ಇನ್ನು ಮುಂತಾದ 75 ಕ್ಕೂ ಹೆಚ್ಚಿನ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಗ್ರಾಮ ವಾಸ್ತವ್ಯದ ಅಂಗವಾಗಿ ಜಿಲ್ಲಾಧಿಕಾರಿಗಳು ಕಂದಾಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮದೆಲ್ಲೆಡೆ ಸಂಚರಿಸಿದರು.
ಈ ಅವಧಿಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆ, ಅಂಗನವಾಡಿ, ಬೋವಿ ಕಾಲೊನಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘ, ವಸತಿಶಾಲೆ ಮುಂತಾದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸಾಮಾಜಿಕ ಭದ್ರತಾ ಯೋಜನೆ ಅಡಿ ಪಿಂಚಣಿ ಸೌಲಭ್ಯ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳು ಸಾಂಕೇತಿಕವಾಗಿ ಮಂಜೂರಾತಿ ಪತ್ರ ವಿತರಿಸಿದರು.
ತಹಸೀಲ್ದಾರ್ ಡಾ.ಎನ್.ಜೆ. ನಾಗರಾಜ್, ಎಚ್.ಬಿ.ಗಣೇಶ್, ಗ್ರಾ.ಪಂ.ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕೊಟ್ರಮ್ಮ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
https://www.suddikanaja.com/2021/03/10/dc-visit-to-aaladalli-village/