ಸುದ್ದಿ ಕಣಜ.ಕಾಂ | DISTRICT | PUNEETH RAJAKUMAR DEATH
ಶಿವಮೊಗ್ಗ: ಬಾಲನಟರಾಗಿ ಬಣ್ಣದ ಲೋಕ ಪ್ರವೇಶಿಸಿದ್ದ ಪವರ್ ಸ್ಟಾರ್ ಪುನೀತ್ ಅವರು ಹೃದಯಾಘಾತದಿಂದ ಶುಕ್ರವಾರ ವಿಧಿವಶರಾಗಿದ್ದಾರೆ.
ತಮ್ಮ ಮನೋಜ್ಞ ನಟನೆಯ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರುವ `ಅಪ್ಪು’ ಸೆಪ್ಟೆಂಬರ್ 1ರಂದು ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರಕ್ಕೆ ಭೇಟಿ ನೀಡಿದ್ದರು. ಕ್ಯಾಂಪಿನ ಕ್ರೌಲ್ ನಲ್ಲಿ ಸುಮಾರು ಹೊತ್ತು ಡಾಕ್ಯುಮೆಂಟರಿಯೊಂದರ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗ ಪಾಲಿಗೆ ಇದೇ ಕೊನೆಯ ಭೇಟಿಯಾಗಿದೆ.
`ಆಕಸ್ಮಿಕ’ ಚಲನ ಚಿತ್ರೀಕರಣದ ವೇಳೆ ಡಾ.ರಾಜಕುಮಾರ್ ಅವರೊಂದಿಗೆ ಪುನೀತ್ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಕೊಡಚಾದ್ರಿ, ಅರಸಾಳು ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆದಿತ್ತು. ಚಿತ್ರರಂಗದಲ್ಲಿ ಹಿಟ್ ಚಿತ್ರಗಳನ್ನು ನೀಡಿ ಖ್ಯಾತಿ ಪಡೆದ ಬಳಿಕವೂ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿಯೂ ಆಗಮಿಸಿದ್ದರು.
ಮುಗಿಲು ಮುಟ್ಟಿದ ಆಕ್ರಂದನ
ಪುನೀತ್ ಅವರ ಸಾವು ಅಪ್ಪು ಅಭಿಮಾನಿಗಳ ಪಾಲಿಗೆ ಗರ ಬಡಿದಂತಾಗಿದೆ. ಏಕಾಏಕಿ ಸಾವಿನ ಸುದ್ದಿ ಕೇಳಿದ ಬಳಿಕ ಆಕ್ರಂದನ ಮುಗಿಲು ಮುಟ್ಟಿದೆ. ಲಕ್ಷ್ಮೀ ಟಾಕೀಸ್ ಮುಂಭಾಗದಲ್ಲಿ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಪುನೀತ್ ಅಕಾಲಿಕ ಅಗಲಿಕೆ ಎಲ್ಲರಿಗೂ ಘಾಸಿ ಉಂಟು ಮಾಡಿದೆ. ಭದ್ರಾವತಿಯಲ್ಲಿ ಅಭಿಮಾನಿಗಳು ಟೈಯರ್ ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.suddikanaja.com/2021/09/01/power-star-puneeth-rajakumar-visited-sakrebailu-elephant-camp/