ಸುದ್ದಿ ಕಣಜ.ಕಾಂ | DISTRICT | POLITICS
ಶಿವಮೊಗ್ಗ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕಾಂಗ್ರೆಸ್ ಪಕ್ಷದ ಸಭೆಯಲ್ಲಿಯೇ ಬಹಿರಂಗವಾಗಿ ಆರ್.ಎಂ.ಮಂಜುನಾಥ್ ಗೌಡರ ವಿರುದ್ಧ ಆರೋಪಗಳ ಮಳೆಗೆರೆದ ಬೆನ್ನಲ್ಲೇ ಕಿಮ್ಮನೆ ವಿರುದ್ಧ ಅಸಮಾಧಾನ ಕೇಳಿಬಂದಿದೆ.
ಈ ಸಂಬಂಧ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಲೋಕೇಶ್, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಅವರು ಶಾಸಕ, ಸಚಿವರಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸಬಹುದಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸದೇ ರೈತ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ್ ಗೌಡರ ಹೆಸರು ಬಹಿರಂಗವಾಗಿ ಹೇಳದೇ ಟೀಕೆ ಮಾಡಿರುವುದು ಬೇಸರ ತಂದಿದೆ. ಕಿಮ್ಮನೆ ಅವರಿಗೆ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಅವರು ಸಚಿವರಾಗಿದ್ದಾಗ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಶಕ್ತಿ ಇತ್ತು. ಅದನ್ನು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾದಯಾತ್ರೆ ಯಶಸ್ವಿ, ಅಭಿನಂದನೆ
ಶರಾವತಿ, ಚಕ್ರ, ಸಾವೇಹಕ್ಲು, ವರಾಹಿ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ತೀರ್ಥಹಳ್ಳಿ ತಾಲ್ಲೂಕಿನ ಕಲ್ಲುಕೊಪ್ಪದಿಂದ ತೀರ್ಥಹಳ್ಳಿ ತಾಲೂಕು ಕಚೇರಿಯವರೆಗೆ ಸುಮಾರು 45 ಕಿಮೀ. ಪಾದಯಾತ್ರೆ ಯಶಸ್ವಿಗೊಳಿಸಿದ ಎಲ್ಲರಿಗೂ ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಲೋಕೇಶ್, ಪ್ರಮುಖರಾದ ಗೋಪಾಲ ನಾಯಕ್, ಸುಧೀರ್, ಟಿ.ಪಿ. ನಾರಾಯಣಪ್ಪ ಉಪಸ್ಥಿತರಿದ್ದರು.
https://www.suddikanaja.com/2021/10/01/kimmane-ratnakar-furious-statement/