ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಮಲೆನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಕೊಲೆಯೊಂದು ನಡೆದಿದ್ದು, ಅದನ್ನು ಪೊಲೀಸರು ಅತ್ಯಂತ ಚಾಕಚಕ್ಯತೆಯಿಂದ ಭೇದಿಸುವಲ್ಲಿ ಸಫಲರಾಗಿದ್ದಾರೆ. ಮರ್ಡರ್ ಹಿಂದಿನ ಮಿಸ್ಟ್ರಿ(ರಹಸ್ಯ)ಯನ್ನು ಭೇದಿಸಲಾಗಿದ್ದು, ಆರೋಪಿಗಳು ಮನೆಯವರೇ ಎಂಬ ಸತ್ಯಾಂಶ ಇನ್ನಷ್ಟು ಆಘಾತಕ್ಕೆ ಕಾರಣವಾಗಿದೆ.
ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುಟ್ಟು ಕರಕಲಾಗಿದ್ದ ಕಾರು ಮತ್ತು ಅಸ್ಥಿಪಂಜರ ಸಿಕ್ಕಿತ್ತು. ಅದರ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಥಿಪಂಜರವಾಗಿ ಸಿಕ್ಕ ವ್ಯಕ್ತಿ ಯಾರು?
ಕಾನನದ ನಡುವೆ ಅಸ್ಥಿಪಂಜರವಾಗಿ ಸಿಕ್ಕಿದ್ದ ವ್ಯಕ್ತಿಯನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ಮುಸ್ಲಿಂಪೇಟೆ ಗ್ರಾಮದ ವಿನೋದ್(45) ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ಅದರ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಭಾರೀ ಜಾಣ್ಮೆಯಿಂದ ನಡೆಸಿದ್ದಾರೆ. ಆ ವೇಳೆ, ಪ್ಲ್ಯಾನ್ಡ್ ಮರ್ಡರ್ ನಡೆದ ರೀತಿಯ ಬಗ್ಗೆ ಗೊತ್ತಾಗಿದೆ.
ಕಾರು ಹಾಗೂ ಅಸ್ಥಿಪಂಜರ ಸಿಕ್ಕಿದ್ದರಂ ಬಗ್ಗೆ ಜೇಡಿಕುಣಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ದೂರು ನೀಡಿದ್ದೇ ತೀರ್ಥಹಳ್ಳಿ ಪೊಲೀಸರು ಜಾಡು ಹಿಡಿದು ತನಿಖೆ ನಡೆಸಿದ್ದಾರೆ. ಆ ವೇಳೆ, ವಿನೋದನ ಕೊಲೆ ಮಾಡಿದ್ದು, ಆತನ ಪತ್ನಿ, ಇಬ್ಬರು ಗಂಡು ಮಕ್ಕಳು, ಪತ್ನಿಯ ಅಕ್ಕನ ಮಗ ಹಾಗೂ ವಿನೋದನ ತಮ್ಮ ಎಂಬ ಶಾಕಿಂಗ್ ಸತ್ಯವೊಂದು ಬೆಳಕಿಗೆ ಬಂದಿದೆ. ಪತ್ನಿ ಬೀನು(42), ಹಿರಿಯ ಮಗ ವಿವೇಕ್(21), ಕಿರಿಯ ಮಗ ವಿಷ್ಣು(19) ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್ ಬೀನು ಅಕ್ಕ ಮಗ ಅಶೋಕ್(23) ಮತ್ತು ವಿನೋದನ ಸಹೋದರ ಸಂಜಯ್ (36) ಎಂಬುವವರನ್ನು ಬಂಧಿಸಲಾಗಿದೆ.
ಕೊಲೆಗೂ ಮುನ್ನ ನಡೆದಿತ್ತು ಭಯಂಕರ ಪ್ಲ್ಯಾನ್
ಕೊಲೆಗಾಗಿ ಮುಂಚೆಯಿಂದಲೇ ಪಕ್ಕಾ ಪ್ಲ್ಯಾನ್ ಮಾಡಲಾಗಿತ್ತು. ಮರ್ಡರ್ ಆದಿಯಾಗಿ ಶವವನ್ನು ಎಲ್ಲಿ, ಹೇಗೆ ಯಾರಿಗೂ ಕಾರಣದಂತೆ ಸುಡಬೇಕು ಎಂಬಿತ್ಯಾದಿಗಳನ್ನು ಸಿನಿಮೀಯ ರೀತಿಯಲ್ಲಿ ಪೂರ್ವ ಯೋಜನೆ ಮಾಡಲಾಗಿತ್ತು. ಅದಕ್ಕೆ ದಿನಾಂಕವನ್ನೂ ಫಿಕ್ಸ್ ಮಾಡಲಾಗಿತ್ತು. ಅದರಂತೆ, ಕಾರ್ಯರೂಪಕ್ಕೆ ತರಲಾಗಿತ್ತು. ಆರೋಪಿಗಳು ಎಷ್ಟೇ ಜಾಣ್ಮೆಯಿಂದ ಕೊಲೆ ಮಾಡಿ ಪರಾರಿಯಾಗಿದ್ದರೂ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುಟುಂಬದಲ್ಲಿನ ಕೆಲವು ಕಲಹಗಳಿಂದಾಗಿ ಕೊಲೆ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ.
ಕುಟುಂಬದ ಸದಸ್ಯರೇ ಆದ ಐವರು ಕೊಲೆ ಮಾಡಿದ್ದಾರೆ. ಸೆಪ್ಟೆಂಬರ್ 25ರಂದು ಸಂಚು ರೂಪಿಸಲಾಗಿದೆ. 26ರಂದು ಅದಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ತರಲಾಗಿದೆ. ಆನಂದಪುರಂದಲ್ಲಿರುವ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ತರಲಾಗಿದೆ. ಅದೇ ರಾತ್ರಿಯಲ್ಲಿದ್ದ ತಂತಿ ಬಿಗಿಯುವ ರಾಡ್, ಸುತ್ತಿಗೆ ಹಾಗೂ ಕಬ್ಬಿಣದ ರಾಡ್
ಬಳಸಿ ಹಲ್ಲೆ ಮಾಡಿ ಕೊಲೆಗೈಯಲಾಗಿದೆ.
ಶವವನ್ನು ಕಾರಿನಲ್ಲಿ ಯಡೇಹಳ್ಳಿ, ರಿಪ್ಪನ್ ಪೇಟೆ, ಹುಂಚದಕಟ್ಟೆ, ಶಂಕ್ರಳ್ಳಿ, ಮಲ್ಲೇಸರ ಮಾರ್ಗವಾಗಿ ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಗ್ರಾಮದ ಹುಣಸೆಕೊಪ್ಪ ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ. ಚಾಲಕರ ಸೀಟ್ ನಲ್ಲಿ ಕೂರಿಸಿ ಕಾರನ್ನು ಸುಡಲಾಗಿದೆ.
ಒಂದುವೇಳೆ, ಅನುಮಾನಗೊಂಡು ತನಿಖೆಗಾಗಿ ಬಂದರೂ ಅನುಮಾನಕ್ಕೆ ದಾರಿ ಮಾಡಕೊಡಬಾರದು ಎಂಬ ಕಾರಣಕ್ಕೆ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ ಮನೆಯಲ್ಲೇ ಇಡಲಾಗಿದೆ. ಕೊಲೆ ಮಾಡಿದ ಜಾಗವನ್ನು ಫಿನಾಯಿಲ್ ಬಳಸಿ ಸರಿಯಾಗಿ ತೊಳೆಯಲಾಗಿದೆ. ನಂಬರ್ ಪ್ಲೇಟ್, ವಿನೋದನ ಮೊಬೈಲ್ ಅನ್ನು ದಾರಿ ಮಧ್ಯೆ ಎಸೆಯಲಾಗಿದೆ. ಆರೋಪಿಗಳು ತಮ್ಮ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ. ಆದರೂ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
https://www.suddikanaja.com/2021/06/04/current-shock-death/