ಸುದ್ದಿ ಕಣಜ.ಕಾಂ | DISTRICT | SHIVAMOGGA DASARA
ಶಿವಮೊಗ್ಗ: ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ‘ಶಿವಮೊಗ್ಗ ದಸರಾ’
ಈ ವರ್ಷ ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಗುರುವಾರ ನಾಡ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ.
ಶಿವಮೊಗ್ಗ ನಗರದಲ್ಲಿ ವಿಜಯ ದಶಮಿಯವರೆಗೆ ನಿರಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಹಾನಗರ ಪಾಲಿಕೆ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿವಮೊಗ್ಗ ದಸರಾಕ್ಕೆ ಚಾಲನೆ ನೀಡಲಾಗಿದೆ. ನಂತರ, ತಾಯಿ ಚಾಮುಂಡೇಶ್ವರಿಯ ಬೆಳ್ಳಿಯ ವಿಗ್ರಹವನ್ನು ತೆರೆದ ವಾಹನದಲ್ಲಿ ಮೆರವಣಿಗೆಯೊಂದಿಗೆ ತರಲಾಯಿತು. ಮಂಗಳವಾದ್ಯಗಳು, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ
ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದವರೆಗೂ ಸಾಗಿದ ಮೆರವಣಿಗೆಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಹಾಗೂ ದಸರಾ ಸಮಿತಿಯ ಸದಸ್ಯರು, ಪಾಲಿಕೆ ಸದಸ್ಯರು, ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು.
ದೇವಿಯನ್ನು ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ವಿಶೇಷ ಅಲಂಕಾರದೊಂದಿಗೆ ಪೂಜಿಸಲಾಗುವುದು.
ದಸರಾ ಕಾರ್ಯಕ್ರಮಗಳು
9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಪರಿಸರ ದಸರಾ, ಯುವ ದಸರಾ, ಮಹಿಳಾ ದಸರಾ, ಸಾಂಸ್ಕೃತಿಕ ದಸರಾ, ಮಕ್ಕಳ ದಸರಾ, ಯೋಗ ದಸರಾ, ರೈತ ದಸರಾ, ರಂಗ ದಸರಾ, ಆಹಾರ ದಸರಾ, ದಸರಾ ಚಲನಚಿತ್ರೋತ್ಸವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಮಹಾನಗರ ಪಾಲಿಕೆ ವತಿಯಿಂದ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಿದರೆ, ರವೀಂದ್ರನಗರದ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಾಲಯ, ಬೊಮ್ಮನಕಟ್ಟೆಯ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ, ಕೋಟೆ ಮಾರಿಕಾಂಬ ದೇವಾಲಯ, ಅಂಬಾಭವಾನಿ ಜೈನ ಮಂದಿರ, ಶುಭಮಂಗಳ ಶನೈಶ್ವರ ದೇವಾಲುಯ ಸೇರಿದಂತೆ ಹಲವು ದೇವಸ್ಥಾಗಳಲ್ಲಿ ಶಕ್ತಿ ದೇವತೆಯ ವಿಶೇಷ ಅಲಂಕಾರಗಳಲ್ಲಿ ಪ್ರತಿಷ್ಠಾಪಿಸಿ ಆರಾಧನೆ ಮಾಡಲಾಗುತ್ತದೆ.
ನಗರದೆಲ್ಲೆಡೆ ದಸರಾ ಬೊಂಬೆ ಪ್ರದರ್ಶನ
ಪ್ರದರ್ಶನಗಳನ್ನು ಕೂಡ ಏರ್ಪಡಿಸಲಾಗಿದೆ. ನವರಾತ್ರಿ ಬೆನ್ನಲ್ಲೇ ಹೂವು, ಹಣ್ಣು, ತರಕಾರಿಗಳ ಮಾರಾಟವೂ ಬಲು ಜೋರಾಗಿ ಸಾಗಿದೆ. ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನ ಮಾರುಕಟ್ಟೆಗೆ ಆಗಮಿಸುತಿದ್ದು, ಶಿವಮೊಗ್ಗೆಯಲ್ಲಿ ಹಬ್ಬದ ವಾತಾವರಣವಿದೆ.
ದಸರಾ ಮಹೋತ್ಸವವನ್ನು ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್ ಉದ್ಘಾಟಿಸಿದರು. ಸಚಿವ ಕೆ.ಎಸ್.ಈಶ್ವರಪ್ಪ ಸೇರಿ ಪ್ರಮುಖರು ಭಾಗಿಯಾಗಿದ್ದರು.
https://www.suddikanaja.com/2021/10/07/musician-manohar-to-inaugurate-shivamogga-dasara-film-festival/