ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ರಾಜ್ಯದ ಪೊಲೀಸರ ಪಾಲಿಗೆ ದೊಡ್ಡ ತಲೆನೋವಾಗಿದ್ದ ರೌಡಿಶೀಟರ್ ವೊಬ್ಬನನ್ನು ಶಿವಮೊಗ್ಗ ಪೊಲೀಸರು ಸೋಮವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಟಿಪ್ಪುನಗರದ ಬಚ್ಚಾ ಅಲಿಯಾಸ್ ಜಮೀರ್ ಅಲಿಯಾಸ್ ಬಚ್ಚನ್(29) ಬಂಧಿತ. ಈತನನ್ನು ನಿರಂತರ ಕಾರ್ಯಾಚರಣೆ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುಂಚೆ ಈತನ ಸಹಚರರಾದ ಬಸವನಗುಡಿ ನಿವಾಸಿಗಳಾದ ಮಹಮದ್ ತೌಹಿದ್ (19) ಹಾಗೂ ಮಹಮದ್ ಬಿಲಾಲ್(21) ಎಂಬುವವರನ್ನು ನವೆಂಬರ್ 16ರಂದೇ ವಶಕ್ಕೆ ಪಡೆಯಲಾಗಿತ್ತು. ಇವರ ಬಳಿಯಿಂದ ಮೂರು ಮೊಬೈಲ್ ಫೋನ್, ಮೂರು ಇಂಟರ್ ನೆಟ್ ಡಾಂಗಲ್, ಒಂದು ವರ್ನಾ ಕಾರು ಸೀಜ್ ಮಾಡಲಾಗಿದೆ.
ಉದ್ಯಮಿಯ ಮನೆಯ ಮೇಲೆ ಕಲ್ಲು ತೂರಾಟ ಕೇಸ್
ಶಾದ್ ನಗರದ ನಿವಾಸಿ ಉದ್ಯಮಿಯೊಬ್ಬರ ಮನೆಯ ಮೇಲೆ ಮನೆಯ ಮೇಲೆ ಅವರು ಮಲಗಿದ್ದಾಗ ಅಕ್ಟೋಬರ್ 25ರಂದು ಕಲ್ಲು ತೂರಾಟ ಮಾಡಲಾಗಿತ್ತು. ನಂತರ, ಬಚ್ಚನ್ ಕಡೆಯಿಂದ ವಾಟ್ಸಾಪ್ ಕರೆ ಬಂದಿದ್ದು, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಸದರಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವುದಲ್ಲಿ ಸಫಲರಾಗಿದ್ದಾರೆ.
ವಾಟ್ಸಾಪ್ ಕರೆ ಮಾಡಿದ್ದಾಗ ಹಣ ನೀಡದಿದ್ದರೆ ಮಕ್ಕಳು, ತಮ್ಮಂದಿರನ್ನು ಹೊಡೆದು ಮನೆಯ ಮೇಲೆ ಪೆಟ್ರೋಲ್ ಬಾಂಬ್ ಹಾಕುವ ಬೆದರಿಕೆ ಕೂಡ ಹಾಕಲಾಗಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎರಡು ವಿಶೇಷ ತಂಡ ರಚನೆ
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಬಚ್ಚನ್ ಪತ್ತೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸಂಜೀವ್ ಕುಮಾರ್, ಕುಂಸಿ ಪೊಲೀಸ್ ಠಾಣೆಯ ಪಿಐ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿತ್ತು. ಈ ತಂಡ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಚ್ಚನ್ ವಿರುದ್ಧ ರಾಜ್ಯದ ಠಾಣೆಗಳಲ್ಲಿ 53 ಕೇಸ್
ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಬಚ್ಚನ್ ವಿರುದ್ಧ ಕೇಸ್ ಗಳಿವೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ 50, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 1, ಶಿವಮೊಗ್ಗ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ 2 ಸೇರಿ ಒಟ್ಟು 53 ಪ್ರಕರಣಗಳು ಈತನ ವಿರುದ್ಧ ದಾಖಲಿಸಲಾಗಿದೆ. ಜೈಲಿನಿಂದ ಬೇಲ್ ಬಂದ ಬಳಿಕ ಮತ್ತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಈತ ತೊಡಗಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ ಬೆದರಿಕೆ, ಮಾರಣಾಂತಿಕ ಹಲ್ಲೆ, ವಂಚನೆ, ಶಸ್ತ್ರಾಸ್ತ್ರ ಕಾಯ್ದೆ, ದರೋಡೆ ಕೇಸ್ ಗಳಿವೆ.