ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ನಗರದ ಸರ್ಜಿ ಕನ್ವೆನ್’ಶನ್ ಹಾಲ್ ನಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಹಮ್ಮಿಕೊಂಡಿದ್ದ `ಚುನಾಯಿತ ಪ್ರತಿನಿಧಿಗಳ ಸಭೆ’ಯಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗಳ ಬಾಣವನ್ನೇ ಸುರಿಸಿದ್ದಾರೆ.
`ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ನಾನು ಸಿಎಂ ಆಗಿದ್ದಾಗ ಇಲಾಖೆಗಳಿಂದ ಎನ್.ಒ.ಸಿ. ನೀಡುವುದಕ್ಕೆ ಕಾಂಟ್ರ್ಯಾಕ್ಟರ್ ಗಳಿಂದ ಕಮೀಷನ್ ಪಡೆದಿರುವುದು ಬಿಜೆಪಿ ಸಾಬೀತು ಪಡಿಸಿದರೆ ರಾಜಕೀಯ ಸನ್ಯಾಸತ್ವ ಪಡೆಯಲು ಸಿದ್ಧನಿದ್ದೇನೆ’ ಎಂದರು.
ಬಿಜೆಪಿ ಅಧಿಕಾರದಲ್ಲಿ ಇದ್ದರೆ ರಾಜ್ಯ ಉಳಿಯುವುದಿಲ್ಲ. ಹೀಗಾಗಿ, ಮತದಾರರು ಕಾಂಗ್ರೆಸ್ ಗೆ ಬೆಂಬಲಿಸಬೇಕು. ಹಾಗೂ ಮೋದಿ ನೀಡಿದ ಭರವಸೆಗಳು ಹುಸಿಯಾಗಿವೆ. ಅಚ್ಛೇ ದಿನ್, ಮನ್ ಕೀ ಬಾತ್ ಹೆಸರಿನಲ್ಲಿ ಮೋಸ ಮಾಡಲಾಗಿದೆ. ಉದ್ಯೋಗ ಸೃಷ್ಟಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಇಲಾಖೆಯ ಹಣ ಬಳಕೆ ಮತ್ತು ಬಿಡುಗಡೆ ವಿಚಾರದಲ್ಲಿ ಆಗಿನ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ, ಅವರಿಗೆ ಮರ್ಯಾದೆಯೇ ಇಲ್ಲ ಎಂದು ಟೀಕಿಸಿದರು. ಈಶ್ವರಪ್ಪ ಅವರಿಗೆ ಮಿದುಳು ಮತ್ತು ನಾಲಿಗೆ ನಡುವಿನ ಲಿಂಕ್ ತಪ್ಪಿದೆ ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ.ಸಂಗಮೇಶ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಕೆ.ಬಿ.ಪ್ರಸನ್ನಕುಮಾರ್, ವಡ್ನಾಳ್ ರಾಜಣ್ಣ, ಡಿ.ಜಿ.ಶಾಂತನಗೌಡ, ಬೇಳೂರು ಗೋಪಾಕೃಷ್ಣ, ಎಚ್.ಎಂ.ಚಂದ್ರಶೇಖರಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
https://www.suddikanaja.com/2021/11/27/garuda-gamana-vrushabha-vahana-kannada-movie-released-in-karnataka-director-raj-b-shetty-cam-for-promotion-and-express-his-deeds-about-cinema-at-shivamogga/