ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಗಾಂಜಾವನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಗಾಂಜಾ ಮಾರಾಟ ಮಾಡುವುದಕ್ಕಾಗಿ ಇನ್ನೋವಾ ಕಾರಿನಲ್ಲಿ ಲಕ್ಕಿನಕೊಪ್ಪ ಕ್ರಾಸ್ ಮೂಲಕ ಕಡೇಕಲ್ ಗ್ರಾಮದ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
READ | ಮಲೆನಾಡಿನಲ್ಲಿ ಕುತೂಹಲ ಹುಟ್ಟಿಸಿದ ‘ಕಪ್ಪೆ ಹಬ್ಬ’, ಏನಿದರ ಉದ್ದೇಶ?
ಶಿವಮೊಗ್ಗದ ಮಳಲಿಕೊಪ್ಪ ನಿವಾಸಿ ದೌಲತ್ ಅಲಿಯಾಸ್ ಗುಂಡು(27), ಇಂದಿರಾನಗರದ ಮುಜೀಬ್ ಖಾನ್ ಅಲಿಯಾಸ್ ಬ್ರಸ್ಟ್ (27) ,ಕಡೇಕಲ್ ನಿವಾಸಿಗಳಾದ ಶೋಹೇಬ್ ಅಲಿಯಾಸ್ ಚೂಡಿ (24), ಮೊಹಮ್ಮದ್ ಜಾಫ್ರುಲ್ಲಾ (24) ಬಂಧಿತರು. ಇವರ ಬಳಿಯಿಂದ ಅಂದಾಜು ₹6.50 ಲಕ್ಷ ಮೌಲ್ಯದ ಒಟ್ಟು 21 ಕೆಜಿ 315 ಗ್ರಾಂ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದಿಂದ ತರುತ್ತಿದ್ದ ಗಾಂಜಾ
ದೌಲತ್, ಮುಜೀಬ್ ಖಾನ್, ಶೋಹೇಬ್ ಮತ್ತು ಮಹಮ್ಮದ್ ಜಾಫ್ರುಲ್ಲಾ ಎಂಬುವರು ಆಂಧ್ರಪ್ರದೇಶ ರಾಜ್ಯದಿಂದ ಇನ್ನೋವಾ ಕಾರ್ ನಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಲಕ್ಕಿನಕೊಪ್ಪ ಕ್ರಾಸ್ ಮೂಲಕ ಕಡೇಕಲ್ ಗ್ರಾಮದ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಪಿ.ಐ ಹಾಗೂ ಸಿಬ್ಬಂದಿ ತಂಡವು ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನ ನಾಲ್ಕು ಬಾಗಿಲುಗಳ ಡೋರ್ ಮ್ಯಾಟ್ ಒಳಗೆ, ಹಿಂಬದಿಯ ಸ್ಟೆಪ್ನಿಯ ಕೆಳಗೆ ಮತ್ತು ಮುಂದಿನ ಬಾನೆಟ್ ಒಳ ಭಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಪ್ಯಾಕೆಟ್ ಗಳಾಗಿ ಮಾಡಿ ಇಟ್ಟುಕೊಂಡು ಸಾಗಿಸಲಾಗುತಿತ್ತು.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.