ಸುದ್ದಿ ಕಣಜ.ಕಾಂ | KARNATAKA | GUEST COLUMN
ಶಿವಮೊಗ್ಗ: 2020ರ ನವೆಂಬರ್ನಲ್ಲಿ ದಾವಣಗೆರೆಯ ಡಿ.ಸಿ.ಆರ್.ಬಿ(district Crime Record bureau) ಪೊಲೀಸ್ ಘಟಕವು 67.7 ಕೆ.ಜಿ. ಪ್ಯಾಂಗೋಲಿನ್ ಚಿಪ್ಪನ್ನು ವಶಪಡಿಸಿಕೊಂಡು 18 ಜನ ಅಂತರ್ ಜಿಲ್ಲಾ ಚಿಪ್ಪುಹಂದಿ ಕಳ್ಳಸಾಗಣೆದಾರರನ್ನು ಬಂಧಿಸಿ 1972 ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. 2018ರಲ್ಲಿಯೂ ಕುದುರೆಮುಖ ವನ್ಯಜೀವಿ ವಿಭಾಗದ ಸಿದ್ದಾಪುರ ರೇಂಜಿನ ಅಂದಿನ ಆರ್.ಎಫ್.ಒ ಸವಿತಾ ದೇವಾಡಿಗ ಅವರು ಶಿವಮೊಗ್ಗ ಜಿಲ್ಲೆ ರಿಪ್ಪನ್’ಪೇಟೆ ಸಮೀಪದ ಹಾಲುಗುಡ್ಡೆಯ ಹಲವರನ್ನು ಬಂಧಿಸಿ ನಂತರ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಸುಮಾರು 67.7 ಕೆಜಿ ಚಿಪ್ಪು ಪಡೆಯಲು 30-40 ವಯಸ್ಕ ಚಿಪ್ಪು ಹಂದಿಗಳನ್ನು ಬೇಟೆಯಾಡಬೇಕು. ಅದರಲ್ಲಿ ಮರಿಗಳ ಚಿಪ್ಪು ಸೇರಿದ್ದರೆ ಕೊಂದ ಸಂಖ್ಯೆ ಇನ್ನೂ ಅಧಿಕ. ಈಗ ಪ್ರಪಂಚದಲ್ಲೇ ಅತೀ ಹೆಚ್ಚು ಕಳ್ಳಸಾಗಣೆಗೆ ಬಲಿಯಾಗಿ ಇನ್ನೇನು ವಂಶ ನಾಶದ ಪಟ್ಟಿ ಸೇರಲು ತವಕಿಸುತ್ತಿರುವ ಚಿಪ್ಪು ಹಂದಿಗಳು ನಮಗೆ ಹಾಗೂ ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಚಿತ್ರದಲ್ಲಿ ಮಾತ್ರ ನೋಡಲು ಲಭ್ಯ!
READ | ಶಿವಮೊಗ್ಗದಲ್ಲಿ ಗಾಂಧೀಜಿ ಹೆಜ್ಜೆ ಗುರುತು, ಅವರು ನೆಟ್ಟಿದ ಕಲ್ಪತರು, ಮಾತನಾಡಿದ ಜಾಗದಲ್ಲಿ ನೆನಪು ಸದಾ ಹಸಿರು
ವಿನಾಶದಂಚಲ್ಲಿರುವ ಪ್ಯಾಂಗೋಲಿನ್
ಪ್ಯಾಂಗೋಲಿನ್ ಗೆ ಮಲಯ ಭಾಷೆಯಲ್ಲಿ ಗುಂಡಾಗಿ ಉರುಳು ಎಂಬ ಅರ್ಥವಿದೆ. ಅಪಾಯ ಬಂದಾಗ ಸುತ್ತಿಕೊಂಡು ಚೆಂಡಿನಾಕಾರವಾದರೆ ಯಾವ ಪ್ರಾಣಿಗಳು ಇವಕ್ಕೆ ಹಾನಿ ಮಾಡಲಾರವು. ಇವು ವಿಕಾಸದಲ್ಲಿ ಅಷ್ಟಾಗಿ ಮುಂದುವರಿಯದ ಹಳೆ ಜಗತ್ತಿನ ಬಹು ಪುರಾತನ ಸಸ್ತನಿಗಳು. ಪ್ರಾಚೀನ ಸಸ್ತನಿಗಳ ಲಕ್ಷಣಗಳನ್ನು ಈಗಲೂ ಉಳಿಸಿಕೊಂಡಿವೆ. ಇವುಗಳ ಬಾಯಲ್ಲಿ ಹಲ್ಲುಗಳಿಲ್ಲ, ಕಿವಿಗಳು ವಿಶೇಷವಾಗಿ ಬೆಳೆದಿಲ್ಲ, ಚಿಕ್ಕ ಕಣ್ಣುಗಳು, ನಾಲಿಗೆ ದೇಹಕ್ಕಿಂತ ಉದ್ದವಿದೆ. ಇವುಗಳಲ್ಲಿ ಜಗತ್ತಿನಾದ್ಯಂತ ಒಂದು ಜಾತಿ ಎಂಟು ಪ್ರಬೇಧಗಳಿದ್ದು, ಆಫ್ರಿಕಾ ಹಾಗೂ ಏಷಿಯಾ ಖಂಡಕ್ಕೆ ಮಾತ್ರ ಸೀಮಿತವಾಗಿವೆ. ಇವುಗಳಲ್ಲಿ ಬಹುತೇಕ ಪ್ರಬೇಧಗಳು ಅಳಿವಿನಂಚಿನಲ್ಲಿದ್ದರೆ, ಕೆಲವು ಅಪಾಯದಲ್ಲಿವೆ. ಭಾರತದಲ್ಲಿ ಚೈನೀಸ್ ಪ್ಯಾಂಗೋಲಿನ್ ಹಾಗೂ ಇಂಡಿಯನ್ ಪ್ಯಾಂಗೋಲಿನ್ ಎಂಬ ಎರಡು ಪ್ರಬೇಧಗಳಿವೆ, ನಮ್ಮ ರಾಜ್ಯದಲ್ಲಿರುವುದು ಇಂಡಿಯನ್ ಪ್ಯಾಂಗೋಲಿನ್.
ದಿನಕ್ಕೆ ಲಕ್ಷಾಂತರ ಇರುವೆಗಳನ್ನು ಭಕ್ಷಿಸುವ ಸಸ್ತನಿ
ಇವುಗಳ ಮುಖ್ಯ ಆಹಾರ ಇರುವೆ, ಗೆದ್ದಲು, ಹುಳುಗಳು, ತನ್ನ ಮುಂದಿನ ಹಾಲಿನ ಮೊನಚು ಉಗುರುಗಳಿಂದ ಇರುವೆ ಗೂಡು, ಗೆದ್ದಲು ಹುತ್ತಗಳನ್ನು ಒಡೆದು ತನ್ನ ಉದ್ದನೆಯ ಅಂಟಿನಂತಹ ನಾಲಿಗೆ ಹೊರಚಾಚಿ ಇರುವೆ ಗೆದ್ದಲುಗಳನ್ನು ನೆಕ್ಕಿ ನುಂಗುತ್ತವೆ. ದಿನಕ್ಕೆ ಲಕ್ಷಾಂತರ ಇರುವೆ, ಗೆದ್ದಲುಗಳನ್ನು ಭಕ್ಷಿಸುತ್ತವೆ.
ಇತ್ತೀಚಿಗೆ ಪ್ಯಾಂಗೋಲಿನ್ ಸಂಖ್ಯೆ ಗಣನೀಯವಾಗಿ ಕುಸಿದಂತೆ, ಮಲೆನಾಡಿನ ಕೆಲವು ಭಾಗಗಳಲ್ಲಿ ಕೆಲವು ಜಾತಿ ಇರುವೆಗಳ ಸಂತತಿ ವಿಪರೀತ ಹೆಚ್ಚಿದೆ. ಕಾಡಲ್ಲಿ ಯಾವುದೇ ಮರದ ಬುಡವನ್ನು ಬಿಡದೆ ಮರದ ಸುತ್ತಲೂ ಗುಂಡಿ ಹೊಡೆದು ಮಣ್ಣನ್ನು ಹೊರಹಾಕಿ ದಿಬ್ಬಗಳನ್ನು ರಚಿಸಿದ ಇರುವೆ ಗೂಡುಗಳ ದೃಶ್ಯ ಕೆಲವು ಕಡೆ ಸಾಮಾನ್ಯ, ಮೊದ ಮೊದಲು ಕಾಡು ಹಾಗೂ ಕೃಷಿ ಜಮೀನಿನಲ್ಲಿ ವಿರಳವಾಗಿ ಕಾಣುತ್ತಿದ್ದ ಇವು ತಮ್ಮ ಸಂಖ್ಯೆ ಹೆಚ್ಚಿಸಿಕೊಂಡು ಹೊಲದಲ್ಲಿ ಬೆಳಸಿದ ಮರಗಳ ಸುತ್ತ ಗೂಡು ರಚಿಸುತ್ತಿವೆ, ಅಡಿಕೆ ಮರಗಳಿಗಂತೂ ಮಳೆಗಾಲದಲ್ಲಿ ಮೀಟಿ ಬೀಳುತ್ತಿವೆ, ಇಲ್ಲಿಗೆ ನಿಲ್ಲುತ್ತಿಲ್ಲ ಇವುಗಳ ಹಾವಳಿ ಮನೆಗಳಿಗೆ ನುಗ್ಗುತ್ತಿರುವ ಇವು ಅಡುಗೆ, ಎಣ್ಣೆ ಪದಾರ್ಥ, ಒಡೆದ ತೆಂಗಿನಕಾಯಿಗೆ ಮುಗಿ ಬೀಳುತ್ತಿವೆ. ತೇವಾಂಶ ಹೆಚ್ಚಿರುವ ಪ್ರದೇಶಗಲ್ಲಿ ಇವುಗಳ ಸಂಖ್ಯೆ ಕಡಿಮೆ.
ಮಲೆನಾಡಲ್ಲಿ ಪುಳ್ಳಿರುವೆ, ಟೆಂಕ್ ಬಾವ, ಸೊಂಟ ಮುರುಕ ಎಂದೆಲ್ಲ ಕರೆವ ಈ ಇರುವೆಯ ಆಂಗ್ಲ ನಾಮ Short-legged Hunchback ant ಹತ್ತಿಪ್ಪತ್ತು ವರ್ಷಗಳ ಹಿಂದೆ ಕಾಡಲ್ಲಿ ವಿರಳವಾಗಿ ಕಾಣುತ್ತಿದ್ದ ಇವು ಈಗ ಕಾಡಲ್ಲಿ ವಿಪರೀತ ಹೆಚ್ಚಾಗಿ ಜೊತೆಗೆ ಗದ್ದೆ ತೋಟ ಹೊಲಗಳನ್ನು ಆಕ್ರಮಿಸಿವೆ.
READ | ಶರಾವತಿ ಲಾಂಚ್ ಆಚೆಗೊಂದು ಅಜ್ಞಾತ ಬದುಕು, ಕಣ್ಮುಚ್ಚಿ ಕುಳಿತ ಆಡಳಿತ ಯಂತ್ರ
ಪ್ರಕೃತಿಯಲ್ಲಿ ಯಾವುದೇ ಜೀವಿಗಳ ಸಂಖ್ಯೆ ಮಿತಿ ಮೀರದಂತೆ ಅವುಗಳನ್ನು ನಿಯಂತ್ರಿಸಲು ಮತ್ತೊಂದು ಪರಭಕ್ಷಕ ಜೀವಿ ಇರುತ್ತದೆ. ಇದು ಜೀವ ವೈವಿಧ್ಯತೆ ಸಮತೋಲನದಲ್ಲಿ ಇರಲು ಬಹು ಅವಶ್ಯಕ. ಇರುವೆಗಳನ್ನು ಭಕ್ಷಿಸಬಲ್ಲ ಚಿಪ್ಪುಹಂದಿಗಳು ಇರುವೆ/ ಗೆದ್ದಲು ಗೂಡುಗಳನ್ನು ಆಳದವರೆಗೂ ಅಗೆದು ಮೊಟ್ಟೆ, ಲಾರ್ವ, ರಾಣಿ ಹುಳುಗಳನ್ನು ತಿನ್ನುತ್ತಿತ್ತು. ದಿನಕ್ಕೆ ಲಕ್ಷ ಲಕ್ಷ ಇರುವೆ, ಗೆದ್ದಲುಗಳನ್ನು ತಿಂದು ಅವುಗಳ ಸಂತತಿ ನಿಯಂತ್ರಣದಲ್ಲಿ ಇಡುತ್ತಿದ್ದವು. ಮನುಷ್ಯನ ಧನ ದಾಹಕ್ಕೆ ಚಿಪ್ಪು ಹಂದಿಗಳು ಬಲಿಯಾಗುತ್ತಿದ್ದಂತೆ, ಕೆಲ ಜಾತಿ ಇರುವೆಗಳ ಸಂತತಿ ವಿಪರೀತ ಹೆಚ್ಚುತ್ತಿದೆ.
ಇರುವೆಗಳು ಯಾವುದೇ ರೋಗ ಹರಡದಿದ್ದರೂ ಚರಂಡಿ, ಕಸದ ತೊಟ್ಟಿ ಮಲಮೂತ್ರಗಳ ಮೇಲೆ ಸಂಚರಿಸುವುದರಿಂದ ಕೆಲವು ರೋಗಕಾರಕ ವೈರಸ್ ಬ್ಯಾಕ್ಟೀರಿಯಾಗಳನ್ನು ಹೊತ್ತು ತರಬಲ್ಲವು, ಆಹಾರದ ಇಟ್ಟ ಪಾತ್ರೆಗಳಲ್ಲಿ ಒಂದೆರಡು ಇರುವೆಗಳಿದ್ದರೆ ಅವನ್ನು ಓಡಿಸಿ ಹಾಗೆಯೇ ತಿನ್ನುತ್ತೇವೆ ಇದು ಕೆಲವು ಸಲ ಅಪಾಯ ತರಬಹುದು.
ಚಿಪ್ಪು ಹಂದಿ, ಜೀವ ವೈವಿಧ್ಯ ರಕ್ಷಣೆಗೇನು ಮಾಡಬೇಕು?
- ರಾಜ್ಯದ ಎಲ್ಲ 13 ವೃತ್ತಗಳಲ್ಲಿನ ಅರಣ್ಯ ಸಂಚಾರಿ ದಳಗಳು ವನ್ಯಜೀವಿ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು.
- ಪ್ರತೀ ಪ್ರಾದೇಶಿಕ ಮತ್ತು ವನ್ಯಜೀವಿ ವಲಯಗಳು ಗಸ್ತಿನಲ್ಲಿ ಸಂಚರಿಸುವಾಗ ಕಂಡುಬರುವ ವನ್ಯಜೀವಿಗಳನ್ನು ಗಮನಿಸಿದ ಬಗ್ಗೆ ಮಾಹಿತಿ ದಾಖಲಿಸುವುದು, ಇದಕ್ಕಾಗಿ ವೈಲ್ಡ್ ವಾಚ್ ಅಥವಾ ಸೂಕ್ತ ಶೀರ್ಷಿಕೆ ಅಡಿ ಪ್ರತ್ಯೇಕ ತಂತ್ರಾಂಶ ಅಭಿವೃದ್ದಿ ಪಡಿಸಬೇಕಿದೆ.
- ವನ್ಯಜೀವಿ ಸಂರಕ್ಷಣಾ ಕಾಯ್ದೆ ಶೆಡ್ಯೂಲ್ ನಲ್ಲಿ ಸೂಕ್ತ ಬದಲಾವಣೆ ಮಾಡಿ, ಶೆಡ್ಯೂಲ್ ವಾರು 1ನೇ ಮತ್ತು 2ನೇ ಅಪರಾಧಗಳಿಗೆ ಗರಿಷ್ಠ ಶಿಕ್ಷೆ ಮತ್ತು ದಂಡ ಪ್ರಮಾಣ ಜಾರಿಗೆ ತರಬೇಕಿದೆ.
- ಅರಣ್ಯ ಇಲಾಖೆಯಲ್ಲಿ ಚಿಪ್ಪುಹಂದಿಗಳ ಇರುವಿಕೆ ಗುರುತಿಸಬಲ್ಲ ಕೆಲವು ಪರಿಣಿತರನ್ನು ನೇಮಿಸಿ ಅವುಗಳ ಬಿಲದ ಬಳಿ ಕ್ಯಾಮೆರಾ ಅಳವಡಿಸಿ, ಆಗಾಗ ಪ್ಯಾಟ್ರೋಲಿಂಗ್ ಮಾಡುವುದು
- ಕಾಡಿನ ಸಮೀಪ ವಾಸಿಸುವ ಜನರಿಗೆ ಅರಿವು ಮೂಡಿಸುವುದು, ಚಿಪ್ಪುಹಂದಿಗಳ ಕಳ್ಳಸಾಗಣೆದಾರರರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಿ ಅವುಗಳನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ. ವನ್ಯಜೀವಿ ಪ್ರಿಯರು ಸ್ವಯಂಸೇವಕರು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.
- ಪ್ರತಿ ವರ್ಷ ಫೆಬ್ರವರಿ ಮೂರನೇ ಶನಿವಾರವನ್ನು ಅಂತರರಾಷ್ಟ್ರೀಯ ಪ್ಯಾಂಗೋಲಿನ್ ದಿನವನ್ನಾಗಿ ಆಚರಿಸಲಾಗುತ್ತದೆ. ವಿಕಸನದಲ್ಲಿ ಹಿಂದಿದ್ದರೂ ಭೂಮಿಯ ಮೇಲೆ ಯಶಸ್ವಿಯಾಗಿ ಬದುಕು ಸಾಗಿಸಿದ್ದ ಜೀವಿಯೊಂದು ವಂಶ ನಾಶದ ಪುಟ ಸೇರುವ ಹಂತ ತಲುಪಿದ್ದು ವಿಷಾದಕರ. ಮಾನವನ ಈ ತಪ್ಪಿಗೆ ಮುಂದೆ ಬಾರಿ ಬೆಲೆ ತೆರಲೇಬೇಕಿದೆ.
ಬೇಟೆಗೆ ಮರೆ ಮಾಚುತ್ತಿದೆ ಚಿಪ್ಪು ಹಂದಿ
ಮೊದಲ್ಲೆಲ್ಲ ಚಿಪ್ಪುಹಂದಿಗಳು ದಾರಿ ತಪ್ಪಿ ಪಟ್ಟಣ ಸಮೀಪ ಬಂದಾಗ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ, ಇಲ್ಲವೆ ಅವರಿವರು ಚಿಪ್ಪು ಹಂದಿ ನೋಡಿದ ಸುದ್ದಿಗಳು ಅಪರೂಪವಾಗಿ ವರದಿಯಾಗುತ್ತಿದ್ದವು. ಕಾಡು ಸುತ್ತಿದರೆ ಚಿಪ್ಪುಹಂದಿಗಳ ಇರುವಿಕೆಗಳ ಗುರುತುಗಳು ಅಲ್ಲಲ್ಲಿ ಕಾಣುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಡು ಸುತ್ತಿದರೆ ಚಿಪ್ಪುಹಂದಿಗಳು 25-30 ವರ್ಷಗಳ ಹಿಂದೆ ಕೊರೆದ ಹಳೆಯ ಕಾಲದ ಬಿಲಗಳು ಕಾಣುತ್ತವೆ, ಅವುಗಳಲ್ಲಿ ಬಹುತೇಕ ಬಿಲಗಳು ಮಳೆ-ಗಾಳಿ ಹೊಡೆತಕ್ಕೆ ಮುಚ್ಚುವ ಹಂತಕ್ಕೆ ಬಂದಿವೆ, ಕೆಲ ಬಿಲಗಳಲ್ಲಿ ಮುಳ್ಳುಹಂದಿಗಳು ವಾಸಿಸುತ್ತಿವೆ, ಚಿಪ್ಪುಹಂದಿಗಳು ಕೊರೆದ ಬಿಲಗಳಲ್ಲಿ ವಾಸಿಸುವ ಮುಳ್ಳುಹಂದಿಗಳಿಗೆ ಸ್ವತಃ ಬಿಲ ಕೊರೆಯಲು ಬರುವುದಿಲ್ಲ! ಹೊಸ ಬಿಲಗಳು ಕಾಣುತ್ತಿಲ್ಲ ಅಂದರೆ ಆ ಕಾಡಲ್ಲಿ ಚಿಪ್ಪುಹಂದಿಗಳಿಲ್ಲ ಎಂದರ್ಥ.
ಚಿಪ್ಪುಹಂದಿ ಬೇಟೆಗಾರರು ಹಾರೆ, ಗುದ್ದಲಿಯೊಂದಿಗೆ ಕಾಡುನುಗ್ಗಿ ಬಿಲಗಳಲ್ಲಿ ಅವುಗಳ ಇರುವಿಕೆಯನ್ನು ಪರೀಕ್ಷಿಸುತ್ತಾರೆ.ನಂತರ ಆಳದವರೆಗೂ ಅಗೆದು ಯಾವುದೇ ಗುಂಡಿನ ಶಬ್ದವಿಲ್ಲದೆ ಸೆರೆಹಿಡಿಯುತ್ತಾರೆ, ಬಹುತೇಕ ರಸ್ತೆಯಂಚಿನಲ್ಲೇ ಅರಣ್ಯ ಇಲಾಖೆ ಗಸ್ತು ಇರುವುದರಿಂದ ಬೆಟ್ಟಗುಡ್ಡಗಳಲ್ಲಿ ಯಾವುದೇ ಭಯವಿಲ್ಲದೆ ತಮ್ಮ ಕೆಲಸ ಮಾಡುತ್ತಿರುತ್ತಾರೆ. ಮಾಂಸಕ್ಕಾಗಿ ಬೇಟೆಯಾಡುತ್ತಿದ್ದಾಗ ಇವುಗಳ ಸಂತತಿ ಸಮಧಾನಕರವಾಗಿತ್ತು, ಯಾವಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇದೆ ಎಂದು ಗೊತ್ತಾಯಿತೋ ಆಗ ಮಧ್ಯವರ್ತಿಗಳು ಈ ಸಸ್ತಿಗಳ ಹಿಂದೆ ಬಿದ್ದಿದ್ದಾರೆ.
ಕೆಲವೊಂದು ತಪ್ಪು ಕಲ್ಪನೆಗೆ ಮೂಕ ಪ್ರಾಣಿಗಳ ಬಲಿ
ಚೀನಾದ ಸಾಂಪ್ರದಾಯಕ ಔಷಧಿ (Traditional Chinese medicine) ಇದೊಂದು ಹುಸಿ ವಿಜ್ಞಾನದಿಂದ ಕೂಡಿದ್ದು. ಅದರ ಹೆಚ್ಚಿನ ಚಿಕಿತ್ಸೆಗಳು ಯಾವುದೇ ತಾರ್ಕಿಕ ಕಾರ್ಯವಿಧಾನ ಹೊಂದಿಲ್ಲ ಎಂದು ಹೇಳಲಾಗಿದೆ. ಈ ಸಾಂಪ್ರದಾಯಕ ಔಷದಿ ತಯಾರಿಕೆಗೆ ಸಸ್ಯಜನ್ಯ ವಸ್ತುಗಳ ಜೊತೆಗೆ ಪ್ರಾಣಿಗಳ ಅಂಗಾಂಗಗಳನ್ನು ಬಳಸುತ್ತಿರುವುದು ಅಳಿವಿನಂಚಿನ ಪ್ರಾಣಿಗಳಿಗೆ ಮತ್ತಷ್ಟು ಮಾರಕವಾಗಿದೆ. ಪ್ಯಾಂಗೋಲಿನ್ ಚಿಪ್ಪುಗಳು, ಖಡ್ಗಮೃಗದ ಕೊಂಬುಗಳನ್ನ ಹೆಚ್ಚು ಬಳಸುತ್ತಿರುವುದರಿಂದ ಈ ಜೀವಿಗಳು ಹೆಚ್ಚೆಚ್ಚು ಕಳ್ಳ ಸಾಗಾಣಿಕೆಗಾಗಿ ಬಲಿಯಾಗತೊಡಗಿದವು. ಆಫ್ರಿಕಾದ ರಾಷ್ಟ್ರಗಳಲ್ಲಿ ಚೀನಾದ ಸಾಂಪ್ರದಾಯಕ ಮೆಡಿಸನ್ನಿನ ದೊಡ್ಡ ದೊಡ್ಡ ಮಳಿಗೆಗಳನ್ನು ತೆರೆದು,ಚೀನಾ ತನ್ನ ವ್ಯಾಪಾರ ಜಾಲ ವಿಸ್ತರಿಸುತ್ತಿರುವುದು ಅಳಿವಿನಂಚಿನ ಪ್ರಾಣಿಗಳಿಗೆ ಮತ್ತಷ್ಟು ಅಪಾಯಕಾರಿಯಾಗಿದೆ.
ವರದಿ | ನಾಗರಾಜ್ ಬೆಳ್ಳೂರು, ನಿಸರ್ಗ ಕನ್ಜರ್ವೇಷನ್ ಟ್ರಸ್ಟ್
https://www.suddikanaja.com/2021/09/09/decline-in-number-of-king-cobra-at-western-ghats/