ಸುದ್ದಿ ಕಣಜ.ಕಾಂ | KARNATAKA | AREANUT
ಶಿವಮೊಗ್ಗ: ಅಡಿಕೆ ನಿಷೇಧ ಕುರಿತು ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವಿ ಅವರು ಭಾರತ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ತೀವ್ರವಾಗಿ ವಿರೋಧಿಸಿದೆ.
ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ, ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯನ್ನು ದೇಶದ ಲಕ್ಷಾಂತರ ಅಡಿಕೆ ಬೆಳೆಗಾರರ ಗಮನಕ್ಕೆ ತಾರದೇ ತೆರೆ ಮರೆಯಲ್ಲಿ ಅಡಿಕೆಗೆ ಕ್ಯಾನ್ಸರ್ ಕಾರಕ ಹಣೆಪಟ್ಟಿಯನ್ನು ಕಟ್ಟಿ ನಿಷೇಧಿಸುವ ಹುನ್ನಾರ ನಡೆಸಿರುವ ಬಗ್ಗೆ ಬೆಳೆಗಾರರಲ್ಲಿ ಸಂಶಯ ಉಂಟು ಮಾಡಿದೆ ಎಂದು ಹೇಳಿದರು.
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರು, ಬಿಜೆಪಿ ಅಡಿಕೆ ಪ್ರಕೋಷ್ಠ ಮತ್ತು ಅಡಿಕೆ ಕಾರ್ಯಪಡೆ ಅಧ್ಯಕ್ಷರು ಕೇಂದ್ರ ಸರ್ಕಾರಕ್ಕೆ ಅಡಿಕೆಯ ಔಷಧೀಯ ಗುಣ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಇದು ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯಿಂದ ಸಾಬೀತು ಆಗುತ್ತದೆ ಎಂದು ಆರೋಪಿಸಿದರು.
READ | 24/01/2022ರ ಅಡಿಕೆ ಧಾರಣೆ, ಯಲ್ಲಾಪುರದಲ್ಲಿ ರಾಶಿಗೆ ಉತ್ತಮ ಬೆಲೆ
ಅಡಿಕೆ ಹಾನಿಕಾರಕವೆಂಬ ವರದಿ ಶಿಫಾರಸು
2000 ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ತಜ್ಞರ ಸಮಿತಿಯ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ತಮ್ಮ ಸಾರಾಂಶ ಶಿಫಾರಸು ಮಾಡಿತ್ತು ಎಂದು ಹೇಳಿದರು.
ರಾಜ್ಯವನ್ನು ಪ್ರತಿನಿಧಿಸುವ 25 ಬಿಜೆಪಿ ಸಂಸದರ ಕೇಂದ್ರ ಸಚಿವರಿಗೆ ಪತ್ರ ಬರೆದು ನಿಷೇಧದ ಕುರಿತು ಭಾರತ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಜತೆ ಚರ್ಚಿಸಿ ಹಾಗೂ ಸರ್ಕಾರ ಅಡಿಕೆ ಬೆಳೆಗಾರರನ್ನು ಒಳಗೊಂಡ ಹೊಸ ತಜ್ಞರ ಸಮಿತಿ ರಚಿಸಬೇಕು. ಅಡಿಕೆ ಕ್ಯಾನ್ಸರ್ ಕಾರಕವಲ್ಲವೆಂದು ಸಂಶೋಧನಾ ವರದಿಯನ್ನು ಪಡೆದು ಹಾಗೂ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಅಂಕೂರ್ ಗುಟ್ಟಾ ಕಂಪನಿ ವಿರುದ್ದ ಇಂಡಿಯನ್ ಅಸ್ತಮಾ ಕೇರ್ ಸೊಸೈಟಿ ಪ್ರಕರಣದಲ್ಲಿ ಹೊಸದಾಗಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಆತಂಕವನ್ನು ನಿವಾರಣೆ ಮಾಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಮುಂದಿನ ಬಜೆಟ್ ಅಧಿವೇಶನದಲ್ಲಿ ಅಡಿಕೆ ನಿಷೇಧ ಮಾಡದಂತೆ ರಾಜ್ಯ ಬಿಜೆಪಿ ಸಂಸದರು ಚರ್ಚೆ ನಡೆಸಬೇಕು. ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬುದನ್ನು ಕಡತದಿಂದ ತೆಗೆಸಲು ಯತ್ನಿಸಬೇಕು. ಇಲ್ಲದಿದ್ದರೆ ಸಂಸದರು ಮನೆಯ ಮುಂದೆ ಅಡಿಕೆ ಬೆಳೆಗಾರರು ಧರಣಿ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇಕ್ಕೇರಿ ರಮೇಶ್, ವೆಂಕಟೇಶ್ ಹೊಳೆಮಡಿಲು, ತರೀಕೆರೆ ದೇವಾನಂದ್, ರಾಮಾ ನಾಯ್ಸ್, ನಿರಂಜನ್ ಇದ್ದರು.
https://www.suddikanaja.com/2021/01/28/areca-nut-added-in-drugs-category-blunder-by-krishi-marata-vahini/