ಸುದ್ದಿ ಕಣಜ.ಕಾಂ | KARNATAKA | AGRICULTURE
ಶಿವಮೊಗ್ಗ: ಕೀಟ ರೋಗ ಮತ್ತು ಕಳೆಗಳ ಬಾಧೆ, ಮಣ್ಣಿನ ಪೋಷಕಾಂಶ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ‘ಕೃಷಿ ಸಂಜೀವಿನಿ’ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ್ ತಿಳಿಸಿದ್ದಾರೆ.
ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯು ನೈಸರ್ಗಿಕ ವಿಕೋಪಗಳಾದ ಅನಾವೃಷ್ಟಿ, ಅತಿವೃಷ್ಟಿ, ಚಂಡಮಾರುತ, ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತ ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ-ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ, ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ.
2020-21ನೇ ಸಾಲಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 40 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲು ಅನುದಾನವನ್ನು ಒದಗಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
- ಸಕಾಲದಲ್ಲಿ ಬೆಳೆಯ ಎಲ್ಲ ಹಂತಗಳಲ್ಲಿ ಸರ್ವೇಕ್ಷಣೆಯನ್ನು ಕೈಗೊಂಡು ಕಂಡುಬಂದಿರುವ, ಕಂಡುಬರಬಹುದಾದ ಕೀಟ/ರೋಗ/ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವುದು.
- ಕೃಷಿ ಸಂಜೀವಿನಿ ಸ್ಥಾಪನೆಯಿಂದ ಪೀಡೆ ಸರ್ವೇಕ್ಷಣಾ ಮತ್ತು ಸಲಹಾ ಘಟಕಗಳು ಇನ್ನೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅನುಕೂಲಕರವಾಗಿದೆ.
- ಸಂಚಾರಿ ವಾಹನದ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯ ರೈತರ ತಾಕುಗಳಿಗೆ ತಾಂತ್ರಿಕ ತಂಡವು ಭೇಟಿ ನೀಡಲು ಸಹಕಾರಿಯಾಗುವುದು.
- ಸರ್ವೇಕ್ಷಣೆಯಲ್ಲಿ ಕೀಟ/ ರೋಗ ಬಾಧೆ ಕಂಡುಬಂದಲ್ಲಿ ತಕ್ಷಣವೇ ರೈತರಿಗೆ ಕೈಗೊಳ್ಳಬೇಕಾದ ಸಂಭವನೀಯ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ರೈತರ ಮೊಬೈಲ್ ಗಳಿಗೆ ಸಂದೇಶ ಅಥವಾ ಮುದ್ರಿತ ಚೀಟಿ ನೀಡುವ ಮೂಲಕ ಉತ್ಪಾದನಾ ವೆಚ್ಚ ಮತ್ತು ಬೆಳೆಹಾನಿಯನ್ನು ತಗ್ಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿರುತ್ತದೆ.
- ಮಣ್ಣಿನ ರಸ ಸಾರ, ಲವಣಾಂಶ, ತೇವಾಂಶ ಹಾಗೂ ಉಷ್ಣಾಂಶವನ್ನು ತ್ವರಿತವಾಗಿ ಸಂವೇದಕಗಳನ್ನು ಬಳಸಿ ತಿಳಿಯಬಹುದಾಗಿರುತ್ತದೆ.
- ರೈತರು ತಮ್ಮ ಮಟ್ಟದಲ್ಲಿ ರಸಗೊಬ್ಬರಗಳ ಕಲಬೆರಕೆಯನ್ನು ಕಡಿಮೆ ವೆಚ್ಚದಲ್ಲಿ ಕಂಡುಕೊಂಡು ಗುಣಮಟ್ಟದ ರಸಗೊಬ್ಬರಗಳನ್ನು ಖರೀದಿಸಬಹುದಾಗಿದೆ. ರಸಗೊಬ್ಬರಗಳು ಕಲಬೆರಕೆಯಾಗಿದೆಯೇ ಅಥವಾ ನಕಲಿ ಗೊಬ್ಬರವೇ ಎಂದು ತಿಳಿಯಲು ಸುಲಭ ಪರೀಕ್ಷೆಯ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ನೀಡಲಾಗುವುದು. ತದನಂತರ ರೈತರು ತಮ್ಮ ಹಂತದಲ್ಲಿಯೇ ರಸಗೊಬ್ಬರಗಳ ಗುಣಮಟ್ಟವನ್ನು ಪ್ರಾರಂಭಿಕವಾಗಿ ತಿಳಿದು ಖರೀದಿಸಬಹುದಾಗಿರುತ್ತದೆ.
- ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನಗಳ ದೈನಂದಿನ ಚಲಿಸುವ ಮಾರ್ಗ ವಾಹನಗಳ ಇರುವಿಕೆಯ ಸ್ಥಳಗಳ ಮಾಹಿತಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಾಹನದಲ್ಲಿರುವ ತಾಂತ್ರಿಕ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಲು ಉಪಗ್ರಹ ಆಧಾರಿತ ಜಿಯೋಫೆನ್ಸಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಮೊಬೈಲ್ ನೆಟ್ ವರ್ಕ್ ಇಲ್ಲದೇ ಕಾರ್ಯ ನಿರ್ವಹಿಸುತ್ತದೆ.
ಜಿಲ್ಲೆಯಲ್ಲಿ ಎರಡು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ರೈತರಿಂದ ಟಾಲ್ ಫ್ರಿ ಸಂಖ್ಯೆ 155313ಕ್ಕೆ ಬರುವ ಕರೆಗಳು, ಇಲಾಖೆಯಿಂದ ರೈತರ ತಾಕುಗಳಿಗೆ ಭೇಟಿ ನೀಡಿದ ವೇಳೆ ಹಾಗೂ ಬೆಳೆ ವಿಮೆ, ಇತರೆ ಮಾಹಿತಿ ಅಭಿಯಾನ ಸೇರಿದಂತೆ ಸುಮಾರು 610ಕ್ಕೂ ಹೆಚ್ಚು ಗ್ರಾಮಗಳಿಗೆ ಕೃಷಿ ಸಂಜೀವಿನ ವಾಹನಗಳಲ್ಲಿ ತೆರಳಿ ರೈತರನ್ನು ಒಟ್ಟುಗೂಡಿಸಿ ಸುಮಾರು 6,460 ತಾಕುಗಳಲ್ಲಿ ಮಾಹಿತಿ ಜೊತೆಗೆ ಕೀಟ ಮತ್ತು ರೋಗಗಳ ಬಾಧೆ ನಿರ್ವಹಣೆ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ತಿಳಿಸಲಾಗಿದೆ.
ರೈತರು ಕೀಟ/ ರೋಗ/ ಕಳೆಗಳ ಬಾಧೆ ಮತ್ತು ಪೋಷಕಾಂಶಗಳ ಕೊರತೆ ಕುರಿತ ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ರೈತರು ಸಹಾಯವಾಣಿ ಸಂಖ್ಯೆ 155313 ಕ್ಕೆ ಕರೆ ಮಾಡಬಹುದು.
https://www.suddikanaja.com/2021/10/04/disease-in-arecanut/