ಸುದ್ದಿ ಕಣಜ.ಕಾಂ | DISTRICT | RELIGIOUS
ಶಿವಮೊಗ್ಗ: ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಕಳೆದ ಒಂದು ವಾರದಿಂದ ಹಿಜಾಬ್ ಮತ್ತು ಕೇಸರಿ ಶಾಲು ಕುರಿತು ನಡೆಯುತ್ತಿರುವ ಘರ್ಷಣೆ ನಿಜಕ್ಕೂ ಆತಂಕ ಮೂಡಿಸಿದೆ ಎಂದು ಶಿವಮೊಗ್ಗ ಬಸವಕೇಂದ್ರ, ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ.ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ.
ಶಿವಮೊಗ್ಗದ ಬಸವಕೇಂದ್ರದ ಡಾ.ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಸಲಹೆ, ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ
ವಿದ್ಯಾರ್ಥಿಗಳು ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸದೇ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ವಿದ್ಯಾರ್ಥಿಗಳ ಸುಂದರ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಡುತ್ತದೆ. ಇಂತಹ ಕ್ಷೇತ್ರದಲ್ಲಿ ಕ್ಷುಲ್ಲಕ ವಿಚಾರಗಳ ಚರ್ಚೆ ನಡೆಯುತ್ತಿರುವುದು, ಅದರಲ್ಲಿ ವಿದ್ಯಾರ್ಥಿ ಸಮೂಹ ಭಾಗಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.
ದೇಶದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನವು ಮೂಲಭೂತ ಹಕ್ಕನ್ನು ನೀಡಿದೆ. ಅದರಲ್ಲಿ ನಮ್ಮ ಧಾರ್ಮಿಕ ವಿಚಾರ ಅನುಸರಿಸುವ ಹಕ್ಕನ್ನು ಸಹ ನೀಡಿದೆ. ಇವುಗಳನ್ನು ಪಾಲಿಸುವಲ್ಲಿ ಕೆಲಮಿತಿಗಳನ್ನು ಸಂವಿಧಾನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ವಿಧಿಸಿರುವ ವಸ್ತ್ರಸಂಹಿತೆಯನ್ನು ಪ್ರತಿಯೊಬ್ಬರು ಪಾಲನೆ ಮಾಡುವುದು ಅಗತ್ಯ ಮತ್ತು ಅನಿವಾರ್ಯ.
READ | ಪಕ್ಷಿ ಪ್ರೇಮಿಗಳಿಗೊಂದು ಸಿಹಿಸುದ್ದಿ, ಮೃಗಾಲಯದಲ್ಲಿ ಬರ್ಡ್ ವಾಚಿಂಗ್ ಕ್ಲಬ್, ಏನಿದರ ಉದ್ದೇಶ?
ಇದು ಬಹಳ ಆಳವಾಗಿ ಮತ್ತು ದೀರ್ಘವಾಗಿ ಚರ್ಚೆ ಮಾಡುವ ವಿಷಯವಲ್ಲ. ಸಮಾನತೆಯ ಆಶಯಗಳು ಅನುಷ್ಠಾನಕ್ಕೆ ಬರಲು ಶಿಕ್ಷಣ ಕ್ಷೇತ್ರದಲ್ಲಿ ಸಮವಸ್ತ್ರ ಬೇಕೇ ಬೇಕು. ಇದನ್ನು ಅರಿತುಕೊಂಡು ವಿದ್ಯಾರ್ಥಿಗಳು ಸಂಯಮದಿಂದ ವರ್ತಿಸಬೇಕು. ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ನ್ಯಾಯಾಲಯದ ತೀರ್ಪು ಬರುವವರೆಗೂ ಸಂಯಮದಿಂದ ವರ್ತಿಸಬೇಕು. ತೀರ್ಪು ಏನೇ ಬಂದರೂ ಅದನ್ನು ಗೌರವಿಸಿ ಸೌರ್ಜನ್ಯದಿಂದ ನಡೆದುಕೊಳ್ಳಬೇಕು.