ಸುದ್ದಿ ಕಣಜ.ಕಾಂ | DISTRICT | WILD LIFE
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹ ಧಾಮ ಮತ್ತು ಸಫಾರಿ (ಶಿವಮೊಗ್ಗ ಮೃಗಾಲಯ)ದಲ್ಲಿ 10 ವರ್ಷದ ಸಿಂಹಿಣಿ ಮಾನ್ಯ ಮೃತಪಟ್ಟಿದೆ.
ಮೈಸೂರಿನಿಂದ ತರಲಾಗಿದ್ದ ಈ ಸಿಂಹಿಣಿ ಮತ್ತು 16 ವರ್ಷದ ಆರ್ಯ ಎಂಬ ಗಂಡು ಸಿಂಹದ ನಡುವೆ ಜಗಳವಾಗಿದ್ದು, ಸಿಬ್ಬಂದಿ ಪಟಾಕಿ ಸಿಡಿಸಿ ಎರಡನ್ನೂ ಬೇರ್ಪಡಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದರೂ ಮಾನ್ಯ ನಿಧನ ಹೊಂದಿದೆ.
ಮಾನ್ಯ ಮತ್ತು ವರಸೆಯಲ್ಲಿ ಅದರ ತಂದೆಯಾಗಿರುವ ಆರ್ಯನನ್ನು ಒಂದೇ ಎನ್ಕ್ಲೌಸರ್ ನಲ್ಲಿ ಬಿಡಲಾಗಿತ್ತು. ಆದರೆ, ಎರಡರ ನಡುವೆ ಜಗಳವಾಗಿದ್ದು, ತೀವ್ರ ಭಯಗೊಂಡಿದ್ದ ಮಾನ್ಯಗೆ ಕಳೆದ 26 ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯನ್ನು ಕಾನೂನು ರೀತ್ಯ ಜರುಗಿಸಿ, ಸಿಂಹಿಣಿ ದೇಹವನ್ನು ವಿಲೇ ಮಾಡಲಾಗಿದೆ. ಮಾನ್ಯಳನ್ನು ಮೈಸೂರು ಮೃಗಾಲಯದಿಂದ ತರಲಾಗಿತ್ತು. ಇದುವರೆಗೆ ಇದಕ್ಕೆ ಯಾವುದೇ ಮರಿ ಸಿಂಹಗಳಿಲ್ಲ. ಮೃಗಾಲಯದಲ್ಲಿ ಈಗ 3 ಗಂಡು ಮತ್ತು 2 ಹೆಣ್ಣು ಸಿಂಹಗಳಿವೆ.