ಸುದ್ದಿ ಕಣಜ.ಕಾಂ | DISTRICT | PROTEST
ಶಿವಮೊಗ್ಗ: ಹಿಜಾಬ್- ಕೇಸರಿ ಶಾಲು ವಿವಾದ ಶಿವಮೊಗ್ಗದಲ್ಲೂ ಆರಂಭವಾಗಿದೆ. ಸೋಮವಾರ ನಗರದ ಸಹ್ಯಾದ್ರಿ ಕಾಲೇಜು, ಎಟಿಎನ್.ಸಿಸಿ, ತೀರ್ಥಹಳ್ಳಿಯ ಬಾಳೆಬೈಲು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳ ನಡೆ ಸಂಘರ್ಷಕ್ಕೆ ಕಾರಣವಾಗಿದೆ. ಜೊತೆಗೆ, ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಮುಸ್ಲಿಂ ಮಹಿಳಾ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
READ | ಇಂಧನ ಇಲಾಖೆಯಲ್ಲಿ ‘ಕನ್ನಡ’ಕ್ಕೆ ಮಣೆ, ಮಾತೃ ಭಾಷೆ ಪಾಸ್ ಆದರಷ್ಟೇ ಅರ್ಹತಾ ಪರೀಕ್ಷೆಗೆ ಎಲಿಜಿಬಲ್
ಕೇಸರಿ ಶಾಲು ಹಾಕಿಕೊಂಡು ಸಹ್ಯಾದ್ರಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು
ಸೋಮವಾರ ಬೆಳಗ್ಗೆ ಏಕಾಏಕಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಆಗಮಿಸಿದ್ದರು. ಶಾಲು ಹಾಕಿಕೊಂಡೇ ತರಗತಿಗೆ ಪ್ರವೇಶಿಸಲು ಯತ್ನಿಸಿದರು. ಆದದರೆ, ಶಾಲು ತೆಗೆದು ಒಳಗೆ ಬರುವಂತೆ ಪ್ರಾಂಶುಪಾಲರು ಸೂಚನೆ ನೀಡಿದರು. ಅದಕ್ಕೆ ಹಿಜಾಬ್ ಧರಿಸಿ ಬಂದರೆ ನಾವೂ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಪಟ್ಟು ಹಿಡಿದರು. ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಘೋಷಣೆ ಕೂಗುತ್ತಾ ಕಾಲೇಜಿನಿಂದ ಹೊರಗಡೆ ಬಂದರು. ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಸಹ ತರಗತಿಗೆ ಪ್ರವೇಶ ನೀಡಲಿಲ್ಲ.
ತೀರ್ಥಹಳ್ಳಿಯಲ್ಲಿ ಪ್ರಾಂಶುಪಾಲರಿಗೆ ಮನವಿ
ಬಾಳೆಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು. ಸಮಾನ ವಸ್ತ್ರ ಸಂಹಿತೆ ಸರಿಯಾಗಿ ಪಾಲನೆ ಮಾಡಬೇಕು. ಹಿಜಾಬ್ ಗೆ ಅವಕಾಶ ನೀಡಬಾರದು. ಇಲ್ಲದಿದ್ದರೆ ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುವುದಾಗಿ ಹೇಳಿದರು. ಕಾಲೇಜು ಪ್ರಾಂಶುಪಾಲ ಧರ್ಮಣ್ಣ ಅವರು ಮನವಿ ಸ್ವೀಕರಿಸಿದರು.
ಶಿವಮೊಗ್ಗ ಮಹಿಳಾ ಒಕ್ಕೂಟದಿಂದ ಮುಷ್ಕರ
ಶಿವಮೊಗ್ಗ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಯಿತು. ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಕಳುಹಿಸಲಾಯಿತು.
ಧಾರ್ಮಿಕ ಸ್ವಾತಂತ್ರ್ಯ ದಮನಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ಹಿಜಾಬ್ ಧರಿಸಲು ಸರ್ಕಾರ ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಒಕ್ಕೂಟ ಆಗ್ರಹಿಸಿದೆ.
READ | ಶಿವಮೊಗ್ಗ- ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ವೇಗ, ಕೇಂದ್ರ ಬಜೆಟ್ ನಲ್ಲಿ ಮೀಸಲಿಟ್ಟ ಅನುದಾನವೆಷ್ಟು ಗೊತ್ತಾ?
ಒಕ್ಕೂಟದ ಮುಖಂಡರಾದ ಐಸಾಸ್ ಎ.ನಾಯಬ್, ಹೀನಾ ಕೌಸರ್, ಯಾಸ್ಮಿನ್, ಒಮ್ಮೆ ಸಲ್ಮಾ, ಸೋಫಿಯಾ, ಹಸೀನಾ, ಪೀಸ್ ಆರ್ಗನೈಜೆಷನ್ ಅಧ್ಯಕ್ಷ ರಿಯಾಜ್ ಅಹಮ್ಮದ್ ಸೇರಿ 500ಕ್ಕೂ ಅಧಿಕ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪೊಲೀಸರಿಂದ ಬಿಗಿ ಬಂದೋಬಸ್ತ್
ವಿದ್ಯಾರ್ಥಿಗಳು ಪಟ್ಟು ಬಿಡದೇ ಪ್ರತಿಭಟನೆಗೆ ಇಳಿದಿದ್ದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಕೋರ್ಟ್ ವೃತ್ತದಲ್ಲಿ ಎಟಿಎನ್.ಸಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಕೆ.ಎಸ್.ಆರ್.ಪಿ.ಯನ್ನು ನಿಯೋಜಿಸಲಾಗಿತ್ತು. ಡಿಸಿ ಕಚೇರಿಗೆ ಎಸ್.ಪಿ. ಬಿ.ಎಂ.ಲಕ್ಷ್ಮೀಪ್ರಸಾದ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2022/01/13/students-teachers-at-four-schools-and-one-degree-college-got-corona-positive-at-shivamogga-district-those-school-and-college-declared-holiday/