ಸುದ್ದಿ ಕಣಜ.ಕಾಂ | KARNATAKA | RAILWAY
ಶಿವಮೊಗ್ಗ: ಕೇಂದ್ರ ಬಜೆಟ್ ನಲ್ಲಿ 50 ಕೋಟಿ ರೂಪಾಯಿ ಅನುದಾನವನ್ನು ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಘೋಷಿಸಲಾಗಿದೆ. ಮಲೆನಾಡಿನಿಂದ ಉತ್ತರ ಕರ್ನಾಟಕಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವೇಗ ಸಿಗಲಿದೆ.
ಕೇಂದ್ರ 50 ಕೋಟಿ ರೂಪಾಯಿ ಅನುದಾನವನ್ನು ಒದಗಿಸುತ್ತಿರುವುದರಿಂದ ಅಷ್ಟೇ ಪ್ರಮಾಣದ ಅನುದಾನವನ್ನು ರಾಜ್ಯ ಸರ್ಕಾರ ಕೂಡ ನೀಡಬೇಕಾಗುತ್ತದೆ. ಈಗಾಗಲೇ ರೈಲ್ವೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಅನುದಾನಕ್ಕೆ ಹಸಿರು ನಿಶಾನೆ ತೋರಿರುವುದರಿಂದ ರೈಲ್ವೆ ವಲಯದಲ್ಲಿ ಪ್ರಗತಿಗೆ ಇನ್ನಷ್ಟು ಓಘ ಸಿಗುವ ಸಾಧ್ಯತೆ ಇದೆ.
ಇದುವರೆಗೆ ಶಿವಮೊಗ್ಗ-ಬೆಂಗಳೂರು ನಡುವೆ ಮಾತ್ರ ರೈಲ್ವೆ ಸಂಪರ್ಕವಿದ್ದು, ರಾಣೆಬೆನ್ನೂರು ಮಾರ್ಗ ಸಿದ್ಧವಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಹಿಂದೆಯೇ ಉದ್ದೇಶಿತ ಯೋಜನೆಯ ಸ್ಥಳ ಪರಿಶೀಲನೆ ಮಾಡಿದ್ದಾರೆ. ಭೂಸ್ವಾಧೀನ ಸೇರಿದಂತೆ ವಿವಿಧ ಹಂತಗಳಲ್ಲಿ ಇದ್ದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದಾರೆ.
378 ಎಕರೆ ಭೂಸ್ವಾಧೀನ ಪೂರ್ಣ
ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ 427 ಎಕರೆ ಭೂಮಿಯಲ್ಲಿ ಇದುವರೆಗೆ 378 ಎಕರೆಯನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.