ಸುದ್ದಿ ಕಣಜ.ಕಾಂ | KARNATAKA | SHIVAMOGGA AIRPORT
ಶಿವಮೊಗ್ಗ: ನಗರದ ಸೋಗಾನೆ (Sogane) ಯಲ್ಲಿ 758 ಎಕರೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ‘ಶಿವಮೊಗ್ಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ (Shivamogga International airport) ದ ಕಾಮಗಾರಿ ಇನ್ನಷ್ಟು ವೇಗ ಪಡೆದಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸಾಗಿರುವ ಏರ್ ಪೋರ್ಟ್ ಗೆ ವಿಮಾನಯಾನ ಸೇವೆ ಒದಗಿಸುವುದಕ್ಕಾಗಿ ಗುತ್ತಿಗೆ ಪಡೆಯಲು ಖಾಸಗಿ ವಿಮಾನ ಯಾನ ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿದೆ. ಕೈಗಾರಿಕಾ ಮೂಲಭೂತ ಸೌಕರ್ಯ ನಿಗಮವು ಉಡಾನ್ ಯೋಜನೆ ಅಡಿಯಲ್ಲಿ ಬಿಡ್ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಆಹ್ವಾನಿಸಲಾಗಿದೆ.
SHIVAMOGGA INTERNATIONAL AIRPORT BLUEPRINT VIDEO
ಏರ್ ಬಸ್ 320 ಮಾದರಿಯ ವಿಮಾನ ನಿಲ್ದಾಣ
ಸೋಗಾನೆಯಲ್ಲಿ ಏರ್ ಬಸ್ 320 ಮಾದರಿಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದ ರನ್ ವೇ, ಎಪ್ರಾನ್, ಟ್ಯಾಕ್ಸಿ ಮಾರ್ಗ, ಆವರಣ, ಗೋಡೆ, ಸಂಪರ್ಕ ರಸ್ತೆ, ವರ್ತುಲ ರಸ್ತೆಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಟರ್ಮಿನಲ್ ಕಟ್ಟಡ, ವಿದ್ಯುತ್ ಉಪ ಕೇಂದ್ರಗಳು ಈ ಸಾಲಿನಲ್ಲಿ ಪೂರ್ಣಗೊಳ್ಳಲಿವೆ. 384 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ನಡೆದು ಬಂದ ದಾರಿ
- 2007ರ ಮಾರ್ಚ್ 23ರಂದು ರಾಜ್ಯ ಸರ್ಕಾರವು ಸೋಗಾನೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಆದೇಶ ಹೊರಡಿಸಿತ್ತು.
- ಆಗ ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶಂಕು ಸ್ಥಾಪನೆಯನ್ನು ನೆರವೇರಿಸಿದ್ದರು.
- 2008ರ ಏಪ್ರಿಲ್ 2ರಂದು ಎಸ್.ಎ.ಡಿ.ಪಿ.ಎಲ್ ಜತೆ ಒಪ್ಪಂದವಾದರೂ ಕಾರ್ಯೋನ್ಮಖವಾಗದೇ ಕಾಮಗಾರಿ ನನೆಗುದಿಗೆ
- 2015ರ ಆಗಸ್ಟ್ 13ರಂದು ವಿಮಾನ ನಿಲ್ದಾಣವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ.
- 2019ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಏರ್ ಪೋರ್ಟ್ ಕಾಮಗಾರಿಗೆ ಮರುಜೀವ
- ಸೋಗಾನೆಗೆ ಖುದ್ದು ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ, ಕಾಮಗಾರಿ ವೇಗಕ್ಕೆ ಖಡಕ್ ವಾರ್ನಿಂಗ್
- 2021ರ ಜೂನ್ 13ರಂದು ವಿಮಾನ ನಿಲ್ದಾಣದ ನೀಲ ನಕ್ಷೆ ಅನಾವರಣಗೊಳಿಸಿದ್ದ ಬಿ.ಎಸ್.ಯಡಿಯೂರಪ್ಪ
- ಉಡಾನ್ ಯೋಜನೆ ಅಡಿ ಶೇ.50ರ ಸಬ್ಸಿಡಿಯಲ್ಲಿ ಶಿವಮೊಗ್ಗದಿಂದ ಮಂಗಳೂರು, ಮುಂಬೈ ಸೇರಿದಂತೆ ಐದು ಮಾರ್ಗಗಳ ಘೋಷಣೆ
ಏನಿದು ಉಡಾನ್, ಜನರಿಗೇನು ಪ್ರಯೋಜನ?
ಜನಸಾಮಾನ್ಯನೂ ಅಗ್ಗದ ದರದಲ್ಲಿ ವಿಮಾನದಲ್ಲಿ ಸಂಚರಿಸಬೇಕು ಎನ್ನುವುದೇ ಉಡಾನ್ (UDAN-ಉಡ್ ದೇಶ್ ಕಾ ಆಮ್ ನಾಗರಿಕ್) ಮೂಲ ಉದ್ದೇಶವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಲ್ಪನೆ ಜನ್ಮ ತಳೆದಾಗಿನಿಂದ ‘ಉಡಾನ್’ ಸೇವೆ ನೀಡುವ ಚಿಂತನೆ ನಡೆಯುತ್ತಿದೆ. ಉಡಾನ್ ಮೂಲಕ ಜನಸಾಮಾನ್ಯರೂ ವಿಮಾನದಲ್ಲಿ ಸಂಚರಿಸಬಹುದು. ಕಡಿಮೆ ದರದಲ್ಲಿ ಎಲ್ಲರೂ ವಿಮಾನದಲ್ಲಿ ಓಡಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಉಡಾನ್ ಯೋಜನೆ ಅಡಿ ಶಿಮ್ಲಾ ಮತ್ತು ನವದೆಹಲಿ ನಡುವೆ ಮೊದಲ ವಿಮಾನ ಯಾನಕ್ಕೆ ಚಾಲನೆ ನೀಡಲಾಗಿತ್ತು. ಇದೇ ಯೋಜನೆಯನ್ನು ನಂತರದ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸಲಾಗಿದೆ. ಶಿವಮೊಗ್ಗಕ್ಕೂ ಉಡಾನ್ ಸೇವೆ ನೀಡುವುದಕ್ಕಾಗಿ ಆರಂಭದಲ್ಲಿಯೇ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದರು. ಜೊತೆಗೆ, ಇದು ಅಂತರರಾಷ್ಟ್ರೀಯ ಮಟ್ಟದ ಏರ್ ಪೋರ್ಟ್ ಆಗಲಿರುವುದರಿಂದ ಸಹಜವಾಗಿಯೇ ಅಧಿಕ ಸ್ಪರ್ಧೆ ಇರಲಿದೆ.
https://www.suddikanaja.com/2021/07/24/air-bus-facility-in-shivamogga-airport-said-bs-yadiyurappa/