ಸುದ್ದಿ ಕಣಜ.ಕಾಂ | DISTRICT | SHIVARATRI
ಶಿವಮೊಗ್ಗ: ನಗರದಲ್ಲಿ ನಿಷೇಧಾಜ್ಞೆ ನಡುವೆಯೇ ಸಂಭ್ರಮದ ಶಿವರಾತ್ರಿ ಆಚರಿಸಲಾಯಿತು. ಹರಕೆರೆ ದೇವಸ್ಥಾನದಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಆದರೆ, ಬೇರೆಯ ದೇವಸ್ಥಾನಗಳಲ್ಲಿ ಭಕ್ತರು ಸರದಿಯಲ್ಲಿ ನಿಂತಿದ್ದರು.
READ | ಶಿವರಾತ್ರಿಯಂದು ಹರಕೆರೆ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನ ಪ್ರವೇಶ ನಿಷೇಧ
ನಗರದ ಎಲ್ಲ ಶಿವ ದೇವಸ್ಥಾನಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಬೆಳಗ್ಗೆಯಿಂದಲೇ ಪೂಜೆಗಳಲ್ಲಿ ಭಾಗವಹಿಸಿದ್ದರು. ಕೋಟೆ ಭೀಮೇಶ್ವರ ದೇವಸ್ಥಾನ, ರವೀಂದ್ರನಗರ ಪಾರ್ಕ್, ವಿನೋಬನಗರ ಶಿವಾಲಯ, ವೀರಶೈವ ಕಲ್ಯಾಣ ಮಂದಿರ, ಹರಕೆರೆ ಶ್ರೀ ರಾಮೇಶ್ವರ ದೇವಸ್ಥಾನ, ಲಗನಾ ಮಂದಿರದ ಶ್ರೀ ಮಂಜುನಾಥೇಶ್ವರ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳನ್ನು ಮಾಡಲಾಗಿತ್ತು.
ಪ್ರತಿ ವರ್ಷ ಹರಕೆರೆ ದೇವಸ್ಥಾನದ ಸುತ್ತ ಹಬ್ಬದ ವಾತಾವರಣ ಇರುತಿತ್ತು. ಆದರೆ, ಈ ಸಲ ನಿಷೇಧಾಜ್ಞೆ ಇರುವುದರಿಂದ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.
ಡಿ.ಎಸ್.ಅರುಣ್ ಕುಟುಂಬದೊಂದಿಗೆ ಪೂಜೆ
ಮಹಾ ಶಿವರಾತ್ರಿಯ ಅಂಗವಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಕುಟುಂಬಸ್ಥರೊಂದಿಗೆ ಅಬ್ಬಲಗೆರೆಯ ನವ್ಯಶ್ರೀ ಈಶ್ವರ ವನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿವರಾತ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪೂಜೆ ಸಲ್ಲಿಸಿ ಶಿವಲಿಂಗಕ್ಕೆ ಅಭಿಷೇಕ ನೆರವೇರಿಸಿದರು. ರೋಟರಿ ರಕ್ತ ನಿಧಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತ ದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿದರು. ನವ್ಯಶ್ರೀ ನಾಗೇಶ್, ದಿನೇಶ್ ವೆಂಕಟೇಶ್, ಗಣೇಶ್, ಗಜೇಂದ್ರ ಇತರರಿದ್ದರು.
ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ
ಮಹಾ ಶಿವರಾತ್ರಿ ಪ್ರಯುಕ್ತ ವಿನೋಬನಗರ ಶಿವಾಲಯದ ಮುಂಭಾಗ ಪ್ರತಿವರ್ಷದಂತೆ ಶ್ರೀ ಬಾಲಗಂಗಾಧರ ತಿಲಕ್ ಯುವ ಪಡೆ ಹಾಗೂ ಸಿಹಿಮೊಗೆ ಕನ್ನಡ ಯುವ ವೇದಿಕೆ ವಿನೋಬನಗರ ಆಶ್ರಯದಲ್ಲಿ ಶಿವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಜ್ಜಿಗೆಯನ್ನು ವಿತರಿಸಲಾಯಿತು.
ಶ್ರೀ ಬಾಲಗಂಗಾಧರ ತಿಲಕ್ ಯುವ ವೇದಿಕೆಯ ಅಧ್ಯಕ್ಷ ಸಂದೀಪ್ ಸುಂದರ್ ರಾಜ್, ಬಡಾವಣೆಯ ಯುವ ಮುಖಂಡರಾದ ಎಚ್.ಪಿ. ಗಿರೀಶ್, ಗುರುಪ್ರಸಾದ್, ಜಶ್ವಂತ್, ಕೆ.ಪಿ. ಪ್ರತೀಕ್, ಗಿರೀಶ್ ಶೆಟ್ಟಿ, ದರ್ಶನ್, ಅಭಿಷೇಕ್ ಗೌಡ, ಮನೋಜ್ ವಿಘ್ನೇಶ್ ಲೋಹಿತ್, ಆಕರ್ಷ್, ದೇವರಾಜ್, ಯಶ್ವಂತ್, ವಿಕಾಸ್ ಇತರರಿದ್ದರು.