ಸುದ್ದಿ ಕಣಜ.ಕಾಂ | DISTRICT | ELEPHANT ATTACK
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ಅವರು ಆನೆಗಳಿಂದ ಹಾನಿಗೊಳಗಾದ ಕೀಗಡಿ (Keegedi) ಗ್ರಾಮದ ರೈತರ ತೋಟಕ್ಕೆ ಅರಣ್ಯಾಧಿಕಾರಿಗಳೊಂದಿಗೆ ಶನಿವಾರ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ಆನೆಗಳು ಗದ್ದೆ, ತೋಟಗಳಿಗೆ ನುಗ್ಗದಂತೆ ಕೈಗೆತ್ತಿಕೊಂಡಿರುವ ಯೋಜನೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
READ | ಮೂಗುಡ್ತಿಯಲ್ಲಿ ಸಕ್ರೆಬೈಲು ಗಜಪಡೆ ಮೊಕ್ಕಾಂ, 3 ಸಾಕಾನೆಗಳ ನೇತೃತ್ವದಲ್ಲಿ ಕೂಂಬಿಂಗ್
ಕಾಡಾನೆ ತಡೆಗೆ ಮಾಸ್ಟರ್ ಪ್ಲ್ಯಾನ್ ಸಿದ್ಧ
ಪ್ಲ್ಯಾನ್ ನಂಬರ್ 1 | ಆನೆಗಳು ಮತ್ತೆ ಬರದಂತೆ ಕಂದಕ ನಿರ್ಮಿಸಲು 29 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಂದಕ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಇದರಿಂದಾಗಿ ಆನೆಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಯಾವುದೇ ರೈತರು ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ಆರಗ ಧೈರ್ಯ ತುಂಬಿದರು.
ಪ್ಲ್ಯಾನ್ ನಂಬರ್ 2 | ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಈ ಪ್ರದೇಶಕ್ಕೆ ಬಂದಿರುವ ಸಂಭವವಿದೆ. ಈ ಸಂಬಂಧ ಸಾಮಾಜಿಕ ಮತ್ತು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳಿಗೆ ಜಂಟಿಯಾಗಿ ಕಾರ್ಯಾಚರಣೆಗೆ ರೂಪುರೇಷೆಗಳನ್ನು ತಯಾರಿಸುವಂತೆ ಸೂಚಿಸಲಾಗಿದೆ. ಶೀಘ್ರವೇ ಈ ಬಗ್ಗೆ ಮಾಹಿತಿ ಸಿಗಲಿದೆ.
ಪ್ಲ್ಯಾನ್ ನಂಬರ್ 3 | ಅಲ್ಲದೇ ಕೀಗಡಿ ಮತ್ತು ರಿಪ್ಪನ್ಪೇಟೆ ಸಮೀಪದ ತಳಲೆಯಲ್ಲಿಯೂ ಸಾಕಷ್ಟು ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅರಣ್ಯ ಇಲಾಖೆಯಲ್ಲಿನ ಸಾಕಾನೆಗಳನ್ನು ಬಳಸಿಕೊಂಡು ಪುಂಡಾನೆಗಳನ್ನು ಹಿಂದಕ್ಕೆ ಕಳುಹಿಸುವ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ ಎಂದರು.
ತೀರ್ಥಹಳ್ಳಿ ಸಮೀಪದ ಶಿಂಗನಬಿದರೆ, ತಳಲೆ, ಕೀಗಡಿ ಮತ್ತು ಮಂಡಗದ್ದೆ ಗ್ರಾಮಗಳ ಸುತ್ತಮುತ್ತಲಿನ ತೋಟಗಳಲ್ಲಿ ಆನೆಗಳ ಹಾವಳಿಯಿಂದಾಗಿ ರೈತರು ಬೆಳೆದ ಅಡಿಕೆ ಗಿಡಗಳು ಹಾನಿಗೊಳಗಾಗಿದ್ದು, ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಆನೆಗಳನ್ನು ಅರಣ್ಯಕ್ಕೆ ವಾಪಸ್ ಅಟ್ಟಲು ಅರಣ್ಯಾಧಿಕಾರಿಗಳು ಕಳೆದ 2 ವಾರಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆ ಆರಂಭಗೊಂಡ ನಂತರ ಆನೆಗಳು ಕಾಣದಾಗಿವೆ. ಹಾನಿಗೊಳಗಾದ ರೈತರು ಸಣ್ಣ, ಅತಿ ಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಸೂಕ್ತ ಪರಿಹಾರ ಕಲ್ಪಿಸಲಾಗುವುದು.
– ಆರಗ ಜ್ಞಾನೇಂದ್ರ, ಗೃಹ ಸಚಿವ
ಆನೆಗಳ ಗುರುತಿಸುವಿಕೆಗೆ ಕಷ್ಟವಾಗುತ್ತಿದೆ
ಇಲ್ಲಿನ ಅರಣ್ಯ ಪ್ರದೇಶ ಭೌಗೋಳಿಕವಾಗಿ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಆನೆಗಳನ್ನು ಹುಡುಕುವುದು, ಅವುಗಳ ಇರುವನ್ನು ಗುರುತಿಸುವುದು ತಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ. ಆನೆಗಳ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮರಿಯಾನೆ ಮತ್ತು ಒಂದು ಹೆಣ್ಣಾನೆ ಇರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಫಸಲು ಬರುವ ಅಡಿಕೆ ಗಿಡಗಳ ಹಾನಿಗೆ ಸಂತ್ರಸ್ತ ಬೆಳೆಗಾರರಿಗೆ ತಕ್ಷಣ ಪರಿಹಾರ ಧನ ವಿತರಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ದೊಡ್ಡ ಪ್ರಮಾಣದ 1.5 ಕಿ.ಮೀ. ದೂರದ ಕಂದಕ ನಿರ್ಮಾಣ ಕಾರ್ಯಕ್ಕೂ ಸೂಚಿಸಲಾಗಿದೆ.
READ | ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ, ಶಿವಮೊಗ್ಗದಲ್ಲಿ ನಡೆಯಲಿದೆ ಉದ್ಯೋಗ ಮೇಳ
ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಈಗಾಗಲೇ ಗುರುತಿಸಿದ ಆನೆಗಳನ್ನು 15 ದಿನಗಳ ಕಾರ್ಯಾಚರಣೆ ನಡೆಸಿ, ಹಿಮ್ಮೆಟ್ಟಿಸಲಾಗಿದೆ. ಹೊಸನಗರ ಸಮೀಪದ ತಳಲೆ ಗ್ರಾಮದ ಸುತ್ತಲ ಪ್ರದೇಶದಲ್ಲಿ ಆನೆಗಳು ಬೀಡು ಬಿಟ್ಟಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅಲ್ಲಿಯೂ ಕಾರ್ಯಾಚರಣೆ ನಡೆಸಿ ಹಿಮ್ಮೆಟ್ಟಿಸಲಾಗುವುದು ಎಂದರು.
ಸುಮಾರು 395 ಚದರ ಕಿ.ಮೀ. ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಈ ಪ್ರದೇಶದಲ್ಲಿ 130ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಜನರು ವಾಸವಾಗಿದ್ದಾರೆ. ಶೆಟ್ಟಿಹಳ್ಳಿ, ಮಲೆಶಂಕರ, ಮಂಜರಿಕೊಪ್ಪ ಮುಂತಾದ ಅನೇಕ ಗ್ರಾಮಗಳು ಅರಣ್ಯದಲ್ಲಿಯೇ ಇವೆ. ಬೇಸಿಗೆಯಲ್ಲಿ ಈ ಅರಣ್ಯ ಪ್ರದೇಶದ ಉದುರೆಲೆ ಕಾಡಾಗಿರುವುದರಿಂದ ಆಹಾರ ಕೊರತೆಯನ್ನು ನೀಗಿಸಿಕೊಳ್ಳಲು ಅಡವಿಯಲ್ಲಿನ ಆನೆಗಳು ಆಹಾರವನ್ನರಸಿ, ಪ್ರದೇಶದಿಂದ ಪ್ರದೇಶಕ್ಕೆ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಜನವಸತಿ ಪ್ರದೇಶದಲ್ಲಿನ ಜನರ ಭಯದಿಂದ ಹಾಗೂ ಸಿಡಿಮದ್ದು ಸಿಡಿಸುವುದರಿಂದ ಆನೆಗಳು ಹೆದರಿರುವ ಸಂಭವವೂ ಇಲ್ಲದಿಲ್ಲ.ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಆನೆಗಳ ಹಾವಳಿಯಿಂದ ಹಾನಿಗೊಳಗಾದ ಜಮೀನುಗಳ 16 ರೈತರು ಪರಿಹಾರ ಧನ ನೀಡುವಂತೆ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಪರಿಹಾರಧನ ವಿತರಿಸಲಾಗುವುದು ಎಂದರು.
ಡಿ.ಎಫ್.ಓ. ಶಂಕರ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ವೈ.ಅಕ್ಷತಾ, ಆದರ್ಶ, ಪ್ರಕಾಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ರೈತರು ಉಪಸ್ಥಿತರಿದ್ದರು.