ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಲಕ್ಕಿ ಡ್ರಾ ಹೆಸರಿನಲ್ಲಿ ರೈತರೊಬ್ಬರಿಗೆ 30,100 ರೂಪಾಯಿ ಮೋಸ ಮಾಡಲಾಗಿದೆ. ಶಿಕಾರಿಪುರ ತಾಲೂಕಿನ ಬಿಳಕಿ ಗ್ರಾಮದ ರೈತ ಮೋಸ ಹೋಗಿದ್ದಾರೆ.
ವಾಟ್ಸಾಪ್ ನಿಂದ ಬಂದ ಕರೆ
ಕೆಬಿಸಿ ಕಂಪನಿ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಮೊಬೈಲ್ ಸಂಖ್ಯೆಗೆ 25 ಲಕ್ಷ ರೂ. ಲಕ್ಕಿ ಡ್ರಾ ಬಂದಿದ್ದು, ಕರೆ ಮಾಡುವಂತೆ ಮತ್ತೊಂದು ಮೊಬೈಲ್ ಸಂಖ್ಯೆ ನೀಡಿದ್ದಾರೆ. ಅದೇ ದಿನ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ನೀಡಿದ ನಂಬರ್ ನಿಂದಲೇ ಕರೆ ಬಂದಿದೆ.
READ | ಮಾರಿಕಾಂಬ ಜಾತ್ರೆ, ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗದ ವ್ಯವಸ್ಥೆ
ಹಂತ ಹಂತವಾಗಿ ಹಣ ಪಡೆದು ಮೋಸ
ಲಕ್ಕಿ ಡ್ರಾ ಹಣವನ್ನು ಖಾತೆಗೆ ಹಾಕಲು ಕೆಲವೊಂದು ಚಾರ್ಜ್ ಗಳಿವೆ. ಅದಕ್ಕಾಗಿ ಹಣ ಹಾಕುವಂತೆ ಅಕೌಂಟ್ ನಂಬರ್ ನೀಡಿದ್ದಾರೆ. ಅದಕ್ಕೆ ಎರಡು ಹಂತದಲ್ಲಿ ಒಟ್ಟು 22,100 ರೂಪಾಯಿ ಹಣವನ್ನು ಮಾರ್ಚ್ 14ರಂದು ಹಾಕಿಸಿಕೊಂಡಿದ್ದಾರೆ. ನಂತರ ಪೇ ಮುಖಾಂತರ 8,000 ರೂಪಾಯಿ ಹಾಕಿದ್ದಾರೆ. ಒಟ್ಟು 30,100 ರೂ. ಹಾಕಿದ ಬಳಿಕವೂ ಮತ್ತಷ್ಟು ಹಣ ಪಾವತಿಸುವಂತೆ ಕೇಳಿದ್ದಕ್ಕೆ ಅನುಮಾನಗೊಂಡು ಇತ್ತೀಚೆಗೆ ದೂರು ನೀಡಿದ್ದಾರೆ. ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್ಚರದಿಂದ ಇರಲು ಪೊಲೀಸರ ಸೂಚನೆ
ಬ್ಯಾಂಕ್ ಮ್ಯಾನೇಜರ್, ಲಕ್ಕಿ ಡ್ರಾ ಹೆಸರಿನಲ್ಲಿ ಕರೆ ಮಾಡಿ ಹಣ ಕಳುಹಿಸುವಂತೆ ಕೇಳಿದರೆ ಹಣ ನೀಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ಜೊತೆಗೆ, ಬ್ಯಾಂಕ್ ಎಟಿಎಂನ ವೈಯಕ್ತಿಕ ಸಂಖ್ಯೆ, ಒಟಿಪಿ, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಕೇಳಿದರೆ ಅವುಗಳನ್ನು ಅಪರಿಚಿತರೊಂದಿಗೆ ಯಾವ ಕಾರಣಕ್ಕೂ ಹಂಚಿಕೊಳ್ಳದಂತೆ ಸೂಚನೆ ನೀಡಿದ್ದಾರೆ.