ಸುದ್ದಿ ಕಣಜ.ಕಾಂ | DISTRICT | MARIKAMBA JATRE
ಶಿವಮೊಗ್ಗ: ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಸ್ಟಾಲ್ ಹಾಕಲು ಅವಕಾಶ ನೀಡದಿರುವ ಬಗ್ಗೆ ಕೈಗೊಂಡ ತೀರ್ಮಾನದ ಕುರಿತು ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಅವರು ಭಾನುವಾರ ಮಾಧ್ಯಮಗೋಷ್ಠಿ ಕರೆದು ಮಾತನಾಡಿದ್ದಾರೆ.
READ | ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ, ಯಾವ ದಿನ ಏನು ಕಾರ್ಯಕ್ರಮ, ಈ ಸಲ ಕುಸ್ತಿ, ಹೆಲಿ ಟೂರಿಸಂ ಇರಲ್ಲ
ಮಾರಿಕಾಂಬ ಸೇವಾ ಸಮಿತಿ ಹೇಳಿದ್ದಿಷ್ಟು
- ಮಾರಿಕಾಂಬ ಜಾತ್ರೆ (Marikamba Jatra) ಎಲ್ಲ ಧರ್ಮ, ಜಾತಿ ಮತ್ತು ಸಮುದಾಯದವರಿಗೆ ಸೇರಿದ್ದು. ಇಲ್ಲಿ ಯಾರನ್ನೂ ದೂರವಿಡುವ ಪ್ರಶ್ನೆಯೇ ಇಲ್ಲ. ಹಾಗಾಗಿ, ಜನರು ಯಾವುದೇ ಗಾಳಿ ಸುದ್ದಿಯನ್ನು ನಂಬಬಾರದು. ಗೊಂದಲಕ್ಕೆ ಒಳಗಾಗಬಾರದು. ಎಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಗೊಳಿಸೋಣ
- ಅನ್ಯಕೋಮಿನವರೂ ಸಹ ಜಾತ್ರೆಗೆ ಅಗತ್ಯವಿರುವ ವಸ್ತುಗಳನ್ನು ದೇವಸ್ಥಾನಕ್ಕೆ ನೀಡಿದ್ದಾರೆ. ಎಲ್ಲರೂ ಶಾಂತಿಯಿಂದ ವ್ಯವಹರಿಸೋಣ
- ಜಾತ್ರೆಯಲ್ಲಿ ಚಿಕ್ಕಾ ಎಂಬುವವರಿಗೆ ಟೆಂಡರ್ ನೀಡಲಾಗಿತ್ತು. ಅವರು ಬಂದು ತನಗೆ ಬೆದರಿಕೆ ಕರೆ ಬಂದಿದೆ. ಅದಕ್ಕಾಗಿ ಟೆಂಡರ್ ನಿಂದ ಹಿಂದೆ ಸರಿಯುತ್ತೇನೆ ಎಂದು ಮನವಿ ಮಾಡಿದ್ದರು. ಅದಕ್ಕಾಗಿ, ಪಾವತಿಸಿದ ಹಣ ವಾಪಸ್ ನೀಡಲಾಗಿದೆ. ನಂತರ ನಡೆದ ಟೆಂಡರ್ ಅನ್ನು ನಾಗರಾಜ್ ಎಂಬುವವರಿಗೆ ನೀಡಲಾಗಿದೆ.
- ಟೆಂಡರ್ ಪಡೆದ ವ್ಯಕ್ತಿಯು ಯಾರಿಗಾದರೂ ಮಳಿಗೆಗಳನ್ನು ಕೊಡಬಹುದು. ಅದು ಅವರ ಆಯ್ಕೆ ಮತ್ತು ಸ್ವಾತಂತ್ರ್ಯ. ಅದರಲ್ಲಿ ಸೇವಾ ಸಮಿತಿ ಮಧ್ಯ ಪ್ರವೇಶಿಸಲು ಅವಕಾಶವಿಲ್ಲ. ಆದರೂ ಅವರನ್ನು ಕರೆದು ಮಾತನಾಡಲಾಗುವುದು.
- ಈ ಸಲ ಮಳಿಗೆ ವಿಚಾರದಲ್ಲಿ ಉಂಟಾದ ವಿವಾದದಿಂದ ಬುದ್ಧಿ ಕಲಿತಿದ್ದೇವೆ. ಮುಂದಿನ ಜಾತ್ರೆಯಲ್ಲಿ ಇದರೆಡೆಗೂ ಗಮನ ಹರಿಸಲಾಗುವುದು. ಯಾವ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ.
- ಈ ಸಲ ಟೆಂಡರ್ ನೀಡಿದವರಿಗೆ ಒಂದೇ ಷರತ್ತು ವಿಧಿಸಲಾಗಿದೆ. ಅದರಂತೆ, ದೇವಸ್ಥಾನದ ಸುತ್ತಮುತ್ತ ಮಳಿಗೆ ಹಾಕುವಂತಿಲ್ಲ. ಪೊಲೀಸ್ ಮತ್ತು ಜಿಲ್ಲಾಡಳಿತ ಸಲಹೆಯ ಮೇರೆಗೆ ಈ ಷರತ್ತು ವಿಧಿಸಲಾಗಿದೆ. ಅದನ್ನು ಯಾರೂ ಮೀರುವಂತಿಲ್ಲ.