ಸುದ್ದಿ ಕಣಜ.ಕಾಂ | TALUK | DC VISIT
ತೀರ್ಥಹಳ್ಳಿ: ತಾಲ್ಲೂಕಿನ ನೊಣಬೂರು (Nonaburu) ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ (jilladhikarigala nade halli kade ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ಸಮಸ್ಯೆಗಳಿಗೆ ಫಟಾ ಫಟ್ ಪರಿಹಾರ
- ನೊಣಬೂರು ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂಬ ಗ್ರಾಮಸ್ಥರ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಒದಗಿಸಲು ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಬಳಸಬೇಕು. ನಿರಂತರ ವಿದ್ಯುತ್ ಪೂರೈಕೆಯನ್ನು ಒಂದೆರಡು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಖಾತ್ರಿಪಡಿಸಬೇಕು. ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು.
- ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಈ ಸ್ವತ್ತು, ಸ್ಮಶಾನ ಭೂಮಿ, ಪಹಣಿ, ಗ್ರಾಮಗಳ ಒಳಗಿನ ರಸ್ತೆಗಳ ನಿರ್ಮಾಣ, ರಿಪೇರಿ ಹಾಗೂ ನಿವೇಶನ ಮಂಜೂರಾತಿ ಸೇರಿದಂತೆ ವಿವಿಧ ವಿಷಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಿ.
- ಅಡಿಕೆ ಸಣ್ಣ ಹಿಡುವಳಿದಾರರು ಹಾಗೂ ಮ್ಯಾಮ್ಕೋಸ್ ಸದಸ್ಯರಿದ್ದು ಅವರು ಎಪಿಎಂಸಿ ಯಾರ್ಡ್ ನಲ್ಲಿ ಜಾಗ ಬೇಕೆಂದು ಕೇಳಿದ್ದಾರೆ. ಮಾರ್ಚ್ 31 ರೊಳಗೆ ಎಪಿಎಂಸಿ ಆವರಣದಲ್ಲಿ ಮ್ಯಾಮ್ಕೋಸ್ ಗಾಗಿ ಸ್ಥಳ ನಿಗದಿಪಡಿಸಿ ನೀಡಬೇಕೆಂದು ತಹಸಿಲ್ದಾರರಿಗೆ ಸೂಚನೆ ನೀಡಿದ್ದೇನೆ ಎಂದರು.
- ಗ್ರಾಮದಲ್ಲಿ ಕುಡಿಯುವ ನೀರಿದೆ. ಆದರೆ ಮೆಸ್ಕಾಂ ನಿಂದ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ನೀರಿನ ಪೂರೈಕೆಯಾಗುತ್ತಿಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ. ಆದ್ದರಿಂದ ಮೆಸ್ಕಾಂ ಎಇಇ ಅವರಿಗೆ ಪ್ರತ್ಯೇಕ ಟಿಸಿಯ ಮೂಲಕ ಲೈನ್ ಹಾಕಿಸಿ ವಿದ್ಯುತ್ ಸರಬರಾಜು ನೀಡಲಾಗುವುದು.
ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಜಿಲ್ಲಾಧಿಕಾರಿಗಳು ನೊಣಬೂರಿನ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಲಾ ಶೈಕ್ಷಣಿಕ ಮತ್ತು ಇತರೆ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಸರಕ್ಕೆ ಭೇಟಿ ನೀಡಿ ಅಲ್ಲಿನ ಅಂಗನವಾಡಿಯಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಲ್ಲೇಸರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಶೈಕ್ಷಣಿಕ ಚಟುವಟಿಕೆ ಕುರಿತು ಸಂವಾದ ನಡೆಸಿದರು.
ಮಲ್ಲೇಸರ ಗ್ರಾಮದ ಪ್ರಗತಿಪರ ಕೃಷಿಕ ಶ್ರೀಧರ್ ಭಟ್ ಇವರ ತೋಟಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ತೋಟದ ಬೆಳೆಗಳ ಕುರಿತು ಪರಿಶೀಲಿಸಿದರು. ಅಲ್ಲಿ ಅವರು ಬಳಸುತ್ತಿರುವ ಕೃಷಿ ಯಂತ್ರಗಳನ್ನು ವೀಕ್ಷಿಸಿ ಚಾಲನೆ ಮಾಡಿದರು.
ನೊಣಬೂರಿನ ಗ್ರಾ.ಪಂ ಆವರಣದಲ್ಲಿ ಸಂಜೆ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಗೃಹ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಸೌಲಭ್ಯ ವಿತರಣೆ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತೀರ್ಥಹಳ್ಳಿ ತಹಸಿಲ್ದಾರ್ ಶ್ರೀಪಾದ್ ಮತ್ತಿತರರು ಉಪಸ್ಥಿತರಿದ್ದರು.