ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಹಲಾಲ್ ಕಟ್ (halal cut) ಮಾಂಸಕ್ಕಾಗಿ ಗಲಾಟೆ ಹಾಗೂ ವಾಗ್ವಾದಕ್ಕೆ ಸಂಬಂಧಿಸಿದಂತೆ ಹಳೇನಗರ ಮತ್ತು ಹೊಸಮನೆ ಪೊಲೀಸ್ ಠಾಣೆಗಳಲ್ಲಿ ಭಜರಂಗ ದಳದ ಏಳು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.
ನಗರದ ಹೊಸಮನೆ ಬಡಾವಣೆ, ಬಿ.ಎಚ್.ರಸ್ತೆ, ಸಂತೆ ಮೈದಾನ, ಸಿ.ಎನ್.ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿರುವ ಚಿಕನ್, ಮಟನ್ ಅಂಗಡಿಗಳು, ರೆಸ್ಟೋರೆಂಟ್ ಗಳಿಗೆ ಬುಧವಾರ ತೆರಳಿದ ಭಜರಂಗ ದಳದ ಕಾರ್ಯಕರ್ತರು ಹಿಂದೂಗಳಿಗೆ ಹಲಾಲ್ ಮಾಡದ ಮಾಂಸ ನೀಡಬೇಕು ಎಂದು ವಾಗ್ವಾದ ಮಾಡಿದ್ದಾರೆ.
ಚಿಕನ್ ಅಂಗಡಿಯಲ್ಲಿ ಮಾತಿನ ಚಕಮಕಿ
ಹೊಸಮನೆ ಠಾಣೆ ವ್ಯಾಪ್ತಿಯಲ್ಲಿರುವ ಚಿಕನ್ ಅಂಗಡಿಯೊಂದರಲ್ಲಿ ಕೆಲಸಗಾರನು ಹಲಾಲ್ ಮಾಡದ ಮಾಂಸ ಯಾರಿಗೂ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕಾಗಿ, ಕಾರ್ಯಕರ್ತರು ಹಾಗೂ ಕೆಲಸಗಾರನ ನಡುವೆ ಮಾತಿನ ಚಕಮಕಿ ಆಗಿದೆ. ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಎಚ್.ರಸ್ತೆಯ ಹೋಟೆಲ್ ನಲ್ಲಿ ಗ್ರಾಹಕನ ಜತೆ ಗಲಾಟೆ
ಬಿ.ಎಚ್. ರಸ್ತೆಯ ಮಾಂಸಾಹಾರಿ ಹೋಟೆಲ್ ಗೆ ತೆರಳಿದ ಭಜರಂಗ ದಳದ ಕಾರ್ಯಕರ್ತರು ಈ ಹೋಟೆಲಿಗೆ ಅಧಿಕ ಸಂಖ್ಯೆಯಲ್ಲಿ ಹಿಂದೂಗಳೇ ಬರುವುದರಿಂದ ಹಲಾಲ್ ಮಾಡದ ಮಾಂಸವನ್ನು ಕೊಡಬೇಕು ಎಂದು ಹೇಳಿದ್ದಾರೆ. ಹೋಟೆಲ್ ನಲ್ಲಿದ್ದ ಗ್ರಾಹಕನೊಬ್ಬ `ನನಗೆ ಹಲಾಲ್ ಮಾಡಿದ ಮಾಂಸವೇ ಬೇಕು. ನನಗೆ ಅದನ್ನೇ ಕೊಡಿ ಎಂದಿದ್ದಾನೆ.’ ಆಗ ಕಾರ್ಯಕರ್ತರು ಹಾಗೂ ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿಚಾರವಾಗಿಯೂ ದೂರು ನೀಡಲಾಗಿದೆ.