ಸುದ್ದಿ ಕಣಜ.ಕಾಂ | DISTRICT | HISTORY
ಶಿಕಾರಿಪುರ: ತಾಲೂಕಿನ ಹಿರೇಜಂಬೂರಿನಲ್ಲಿ ಭೂತಗೋಸಿಯ ಗೋಸಾಸ ಕಲ್ಲು ಇತ್ತೀಚೆಗೆ ದೊರೆತಿದೆ.
ಕೊಂಡೆಸರ ಭೂತಗೋಸಿ ಎಂಬುವವನು ಹತ್ತನೇ ಶತಮಾನದ ಅವಧಿಯಲ್ಲಿ ಈಗಿನ ಬೇಚರಾಖ್ ಗ್ರಾಮವಾದ ಉತ್ತರಾಣಿ ಗ್ರಾಮದ ಗಾವುಂಡನಾಗಿದ್ದ. ಈ ಅವಧಿಯಲ್ಲಿ ಬನವಾಸಿ 12000 ನಾಡನ್ನು ಭೀಮರಾಜನು ಆಳುತ್ತಿದ್ದ.
ಕ್ರಿ.ಶ.1003ರ ಅವಧಿಯಲ್ಲಿ ಭೂತಗೋಸಿಯು ಒಂದು ದೇವಾಲಯ ನಿರ್ಮಿಸಿ, ಅದರಲ್ಲಿ ಲಿಂಗಪ್ರತಿಷ್ಠೆ ಮಾಡಿಸಿ, ದೇವಾಲಯದ ನಿರ್ವಹಣೆಗೆಂದು ಒಂದು ಮತ್ತರು ಭೂಮಿ ಹಾಗೂ ಗೋವುಗಳನ್ನು ದಾನ ನೀಡುತ್ತಾನೆ. ಈ ವಿವರಗಳನ್ನು ಒಳಗೊಂಡ ಶಾಸನ ಉತ್ತರಾಣಿ ಹಳ್ಳಿಯ ವೀರಭದ್ರ ದೇವಾಲಯದ ಉತ್ತರ ದಿಕ್ಕಿನಲ್ಲಿದೆ.
ಶಾಸನವೇನು ಹೇಳುತ್ತದೆ?
ಹಿರೇಜಂಬೂರಿನ ಕುಕಲೇರ ದೇವೇಂದ್ರಪ್ಪನವರ ಮನೆಯ ಹಿಂದಿರುವ ಎರಡು ಗೋಸಾಸ ಕಲ್ಲುಗಳಿದ್ದು, ಅವುಗಳ ಪೈಕಿ ಒಂದರಲ್ಲಿ ಮೂರು ಸಾಲಿನ ಶಾಸನ ಪಾಠವಿದೆ. ಭೂತಗೋಸಿಯು ಅಗ್ರಹಾರ ಜಂಬೂರಿನ (ಹಿರೇಜಂಬೂರು) ಮಹಾನ್ ಪಂಡಿತರಾದ ಕೇಶವರಿಗೆ 12 ಗದ್ಯಾಣ ದ್ರವ್ಯ ಹಾಗೂ ಸಾವಿರಾರು ಗೋವುಗಳನ್ನು ದಾನ ನೀಡಿದ ವಿವರವನ್ನು ಈ ಶಾಸನ ಹೊಂದಿದೆ.
ಕೇಶವ ಪಂಡಿತರು ಹಿರೇಜಂಬೂರಿನ ವಿದ್ಯಾಲಯದ ಉಪಾಧ್ಯಾಯರಾಗಿದ್ದು ದಾನ- ಧರ್ಮ ಹಾಗೂ ಸಾಮಾಜಿಕ ಸಾಮರಸ್ಯದ ನಾಯಕರಾಗಿದ್ದರು. ಅವರ ವಿದ್ಯಾಲಯದಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಅವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಇದ್ದುದಾಗಿ ಹಿರೇಜಂಬೂರಿನಲ್ಲಿರುವ ಇನ್ನೊಂದು ಶಾಸನ ಮಾಹಿತಿ ನೀಡುತ್ತದೆ.
ಇದನ್ನು ಸ್ಥಳೀಯ ಇತಿಹಾಸ ಸಂಶೋಧಕರಾದ ರಮೇಶ ಬಿ. ಹಿರೇಜಂಬೂರು ಪತ್ತೆ ಮಾಡಿದ್ದಾರೆ. ಗ್ರಾಮದ ರಾಜೇಶ್, ದೇವೇಂದ್ರಪ್ಪ, ರಂಗಪ್ಪ, ಅಜ್ಜಪ್ಪ, ಜಗದೀಶ್ ಸಹಾಯ ನೀಡಿರುತ್ತಾರೆ.