ಸುದ್ದಿ ಕಣಜ.ಕಾಂ | DISTRICT | JAGJIVAN RAM
ಶಿವಮೊಗ್ಗ: ಸಮಾಜದಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದವರು ಜಾಗೃತಿ ಹೊಂದಬೇಕು. ಹೊಂದುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ. ತಮ್ಮ ಸಂಪುಟದ 77 ಮಂತ್ರಿಗಳ ಪೈಕಿ 27 ಜನರು ಹಿಂದುಳಿದ ಮತ್ತು 20 ಜನ ಪರಿಶಿಷ್ಟರಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನ ರಾಮ್ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
READ | ಈ ವರ್ಷ ಹೊಸ ದಾಖಲೆ ಬರೆದ ಪೆಟ್ರೋಲ್, ಡಿಸೇಲ್ ರೇಟ್, ಶಿವಮೊಗ್ಗದಲ್ಲಿ ಇಂದಿನ ದರವೆಷ್ಟು?
ಸ್ವಾತಂತ್ರ್ಯಾನಂತರ ಬ್ಯಾಕ್ ಲಾಗ್ ಹುದ್ದೆಗಳು ಭರ್ತಿ ಆಗಿಲ್ಲ. ಕಾರಣ ಈ ವರ್ಗದಲ್ಲಿ ಶಿಕ್ಷಣದ ಕೊರತೆಯೂ ಒಂದು. ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ ಅವಧಿಯಲ್ಲಿ ಎಲ್ಲ ಪಕ್ಷಗಳೊಡಗೂಡಿ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದ್ದರು. ಈ ವರ್ಗದ ಜನ ಕೂಡ ತಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಉಪಯೋಗಿಸಲು ಮುಂದೆ ಬರಬೇಕು ಎಂದು ತಿಳಿಸಿದರು.
ಮೇಲುಕೀಳೆಂಬ ತಾರತಮ್ಯ ಹೋಗಲಾಡಿಸಿ
ಸಮಾಜದಲ್ಲಿರುವ ಮೇಲು-ಕೀಳೆಂಬ ತಾರತಮ್ಯವನ್ನು ಹೋಗಲಾಡಿಸಬೇಕೆಂದು ಡಾ.ಬಾಬು ಜಗಜೀವನ ರಾಮ್ ಅವರಂತಹ ಮಹಾನ್ ವ್ಯಕ್ತಿಗಳು ಕನಸು ಕಂಡಿದ್ದರು. ಅವರ ಕನಸನ್ನು ನನಸು ಮಾಡುವ ಪ್ರತಿಜ್ಞೆ ತೆಗೆದುಕೊಳ್ಳುವ ದಿನ ಇದಾಗಿ ಎಂದರು.
ಇಡೀ ದೇಶವನ್ನು ಸರಿಯಾದ ಧಿಕ್ಕಿನಲ್ಲಿ ನಡೆಸುವ ಪ್ರತಿಭೆಯನ್ನು ಹೊಂದಿದ್ದ ಡಾ.ಬಾಬು ಜಗಜೀವನರಾಮ್ ಅವರು ದೇಶದ ಪ್ರಧಾನಿ ಆಗಲಿಲ್ಲ ಎಂಬ ನೋವು ನನಗೆ ಕಾಡುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ನಮ್ಮ ಅಕ್ಕಪಕ್ಕದ ರಾಷ್ಟ್ರಗಳು ದಿವಾಳಿಯಾಗುತ್ತಿರುವುದನ್ನು ನೋಡಿದರೆ ಅವುಗಳ ಬುನಾದಿ ಸರಿ ಇಲ್ಲ ಎಂದು ಮನವರಿಕೆ ಆಗುತ್ತದೆ. ಸುಮಾರು 53 ರಾಷ್ಟ್ರಗಳಿಂದ ಪಡೆಯಲಾದ ನಮ್ಮ ಸಂವಿಧಾನ ಅದ್ಭುತವಾಗಿದೆ. ನಾವು ಜೀವನ ಮಾಡುವ ಸ್ಥಿತಿಯನ್ನು ನಿರ್ಮಿಸಿಕೊಟ್ಟಿದೆ. ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿ ಮತ್ತು ಕಾರ್ಮಿಕರ ಏಳ್ಗೆಗಾಗಿ ಹೋರಾಡಿದರು. ಹಲವಾರು ಜನಾಂಗಗಳಿಗೆ ಶಕ್ತಿ ತುಂಬಿದರು ಎಂದು ಹೇಳಿದರು.
READ | ಕುಮದ್ವತಿ ನದಿ ನೀರಿಗೆ ವಿಷ ಬೆರೆಸಿದ ದುಷ್ಕರ್ಮಿಗಳು, ಜಲಚರಗಳ ಮಾರಣಹೋಮ
ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಜಿ.ವೆಂಕಟೇಶ್ ವಿಶೇಷ ಉಪನ್ಯಾಸ ನೀಡಿದರು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಸದಸ್ಯರಾದ ಸುರೇಖಾ ಮುರಳಿಧರ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಎಡಿಸಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ನಾಗರಾಜ್ ಉಪಸ್ಥಿತರಿದ್ದರು.