ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ. ನಾಲ್ವರನ್ನು ಬಂಧಿಸಿ ಅವರಿಂದ 22 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾವೇರಿ ಪಟ್ಟಣದ ನಾಂಗೇಂದ್ರನಮಟ್ಟಿಯ ಸುದೀಪ್ ಅಲಿಯಾಸ್ ಚೂಪಾ(19), ಅಜಯ್ ಅಲಿಯಾಸ್ ಅಜ್ಜಪ್ಪ(20),
ಸಿದ್ದರಗುಡಿಸಲಿನ ಶಾಂತಿನಗರದ ಗಂಗಾಧರ್ ಅಲಿಯಾಸ್ ಸಂಜು (23) ಹಾಗೂ ಕದ್ದ ಬೈಕ್ ಗಳನ್ನು ಸ್ವೀಕರಿಸುತಿದ್ದ ಹಾವೇರಿಯ ಶಿವ ಬಸವನಗರದ ಗುರುರಾಜ್(25) ಎಂಬುವವರನ್ನು ಬಂಧಿಸಲಾಗಿದೆ.
ಪ್ರಕರಣ ಬೇಧಿಸಿದ ವಿಶೇಷ ತಂಡ
ಮಾರ್ಚ್ 14ರ ರಾತ್ರಿ ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರೂ ನಗರದ ವಾಸದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಆದ ಬಗ್ಗೆ ದೂರು ದಾಖಲಾಗಿತ್ತು. ಇದರ ಬಗ್ಗೆ ತನಿಖೆಗೆ ಕಾರ್ಗಲ್ ಸಿಪಿಐ, ಪಿಎಸ್.ಐ, ಸಾಗರ ಟೌನ್ ಪಿಎಸ್.ಐ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಆನವಟ್ಟಿ, ಸೊರಬ, ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ಮತ್ತು ಹಾವೇರಿ ಜಿಲ್ಲೆ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ, ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪುನಹ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
₹30,50,000 ಮೌಲ್ಯದ ಬೈಕ್ ವಶಕ್ಕೆ
8 ಬುಲೆಟ್ ಬೈಕ್, 1 ಕೆಟಿಎಂ ಬೈಕ್, 1 ಡ್ಯೂಕ್, 1 ಬಜಾಜ್ ಪಲ್ಸರ್, 9 ಸ್ಪ್ಲೆಂಡರ್ ಪ್ಲಸ್, 1 ಯಮಹಾ ಮತ್ತು 1 ಸ್ಪ್ಲೆಂಡರ್ ಪ್ರೋ ಬೈಕ್ ಸೇರಿದಂತೆ ಅಂದಾಜು ₹30,50,000 ಮೌಲ್ಯದ ಒಟ್ಟು 22 ಬೈಕ್ ಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.