ಸುದ್ದಿ ಕಣಜ.ಕಾಂ | DISTRICT | HARSHA TRUST
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷ ಹಿಂದೂ ಹೆಸರಿನಲ್ಲಿ ‘ಹರ್ಷ ಚಾರಿಟೆಬಲ್ ಟ್ರಸ್ಟ್’ ಆರಂಭಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಹಾಗೂಹರ್ಷನ ಸಹೋದರಿ ಅಶ್ವಿನಿ ಹೇಳಿದರು.
ಮಾಧ್ಯಮಗೋಷ್ಢಿಯಲ್ಲಿ ಮಾತನಾಡಿದ ಅವರು, ಹರ್ಷನ ಸಾವು ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ತಾಯಿ ದುಃಖದಲ್ಲಿದ್ದರೆ, ತಂದೆಯ ಆರೋಗ್ಯ ಸರಿಯಿಲ್ಲ. ಇವೆಲ್ಲವುಗಳ ನಡುವೆ ಸಮಾಜಕ್ಕೆ ಏನಾದರೂ ನೀಡಬೇಕೆಂಬ ಉದ್ದೇಶದಿಂದ ಟ್ರಸ್ಟ್ ಮಾಡಲಾಗಿದೆ. ಹರ್ಣ ಸಾವಿನ ಬಳಿಕ ಹಿಂದೂ ಸಂಘಟನೆ, ಮುಖಂಡರು ಹಾಗೂ ಸರ್ಕಾರದಿಂದ ಸಹಾಯ ಧನ ನೀಡಲಾಗಿದೆ. ಅದರ ಒಂದು ಭಾಗವನ್ನು ಟ್ರಸ್ಟ್ ಗಾಗಿ ಮೀಸಲು ಇಡಲಾಗಿದೆ ಎಂದರು.
ಟ್ರಸ್ಟ್ ನಲ್ಲಿ ಯಾರ್ಯಾರಿದ್ದಾರೆ?
ಟ್ರಸ್ಟ್ ನಲ್ಲಿ ಸಹೋದರಿ ರಜನಿ ಉಪಾಧ್ಯಕ್ಷರಾಗಿದ್ದಾರೆ. ವ್ಯವಸ್ಥಾಪಕ ಟ್ರಸ್ಟಿಯಾಗಿ ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಕಾರ್ಯದರ್ಶಿಯಾಗಿ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿಯಾಗಿ ಪುರುಷೋತ್ತಮ್ ಕೆ.ಕೆ., ಖಜಾಂಚಿಯಾಗಿ ಕೆ. ಫಣೀಶ್ ಇದ್ದಾರೆ.
READ | ಹರ್ಷ ಹಿಂದೂ ಹತ್ಯೆ ಪ್ರಕರಣ, ತನಿಖೆ ಆರಂಭಿಸಿದ NIA, ಎಲ್ಲೆಲ್ಲಿ ಭೇಟಿ
ವಿದ್ಯಾರ್ಥಿಗಳಿಗೆ ಆಸರೆಯಾಗುವ ಉದ್ದೇಶ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಬಡತನದ ಮಧ್ಯದಲ್ಲಿಯೇ ಉತ್ತಮ ಸಾಧನೆ ಮಾಡಿ ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟಪಡುವ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗುವುದು ಟ್ರಸ್ಟ್ ಉದ್ದೇಶವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಬಡವರಿಗೆ ನೆರವು ನೀಡುವುದು ಹಾಗೂ ಗೋ ಶಾಲೆಗಳ ನಿರ್ಮಾಣ ಮಾಡುವುದು.
ಈಗಾಗಲೇ ಟ್ರಸ್ಟ್ ಪಿಎಫ್.ಐ ಪ್ರಚೋದಿತ ಗಲಭೆಯಲ್ಲಿ ಮೃತನಾದ ವಿಶ್ವನಾಥ ಶೆಟ್ಟಿ ಅವರ ಪುತ್ರ ಯಶಸ್ ನ ವಿದ್ಯಾಭ್ಯಾಸಕ್ಕೆ ಮತ್ತು ಕಾಸರಗೋಡಿನಲ್ಲಿ ಮೃತರಾದ ಆರ್.ಎಸ್.ಎಸ್. ಕಾರ್ಯಕರ್ತ ಜ್ಯೋತಿಷ್ ಅವರ ಕುಟುಂಬಕ್ಕೆ ₹2 ಲಕ್ಷ ರೂ. ನೀಡಿರುವುದಲ್ಲದೇ ಅವರ ಎರಡನೇ ಮಗನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಹರ್ಷನ ಕುಟುಂಬ ಒಪ್ಪಿಗೆ ನೀಡಿದ್ದು, ಇದು ಟ್ರಸ್ಟ್ ಆರಂಭಕ್ಕೆ ಮುನ್ನುಡಿಯಾಗಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಹರ್ಷನ ತಂದೆ ನಾಗರಾಜ್, ತಾಯಿ ಪದ್ಮಾ ನಾಗರಾಜ್, ಸಹೋದರಿ ರಜನಿ, ಕಾರ್ಯದರ್ಶಿ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಫಣೀಶ್, ವಿನಯ್ ಉಪಸ್ಥಿತರಿದ್ದರು.