ಸುದ್ದಿ ಕಣಜ.ಕಾಂ | KARNATAKA | CRIME NEWS
ಶಿವಮೊಗ್ಗ: ಕಾಳಸಂತೆಯಲ್ಲಿ ಸಾಗಿಸುತ್ತಿದ್ದ ತಿಮಿಂಗಲ ವಾಂತಿ (ಅಂಬರ್ ಗ್ರೀಸ್-ambergris) ಅನ್ನು ವಶಕ್ಕೆ ಪಡೆದಿರುವ ಸಾಗರ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಗಲ್ ನ ಸಂದೀಪ್ ಜಾನ್(49), ಸಾಗರದ ಕೆಳದಿ ರಸ್ತೆಯ ರಾಮಪ್ಪ(40) ಮತ್ತು ನೆಹರೂ ರಸ್ತೆಯ ರೋಹಿತ್ (42) ಎಂಬುವವರನ್ನು ಬಂಧಿಸಲಾಗಿದೆ. ಇವರ ಬಳಿಯಿಂದ 50 ಲಕ್ಷ ರೂಪಾಯಿ ಮೌಲ್ಯದ ಅರ್ಧ ಕೆಜಿ ತಿಮಿಂಗಲ ವಾಂತಿಯನ್ನು ವಶಕ್ಕೆ ಪಡೆಯಲಾಗಿದೆ.
READ | ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಪ್ರತಿಭೆ
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ
ಸಾಗರದಿಂದ ಮಂಗಳೂರಿಗೆ ಕೊಂಡೊಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಸಾಗರ ಉಪ ವಿಭಾಗದ ಡಿವೈಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಾಗರ ನಗರ ಠಾಣೆ ಇನ್ ಸ್ಪೆಕ್ಟರ್ ಕೃಷ್ಣಪ್ಪ, ಪಿಎಸ್.ಐ ಟಿ.ಡಿ.ಸಾಗರಕರ್ ಸೇರಿದಂತೆ ಇತರರು ಕಾರ್ಯಾಚರಣೆ ನಡೆಸಿದ್ದಾರೆ.
ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ವಿಚಾರ ತಿಳಿದುಬಂದಿದ್ದು, ಎಲ್ಲಿಂದ ತಿಮಿಂಗಲ ವಾಂತಿಯನ್ನು ಪಡೆಯಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ತಿಮಿಂಗಲ ವಾಂತಿಯ ಪ್ರಯೋಜನವೇನು?
ಸಮುದ್ರದಲ್ಲಿ ಸಿಗುವ ತಿಮಿಂಗಲ ವಾಂತಿಗೆ ಭಾರಿ ಬೇಡಿಕೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಇದೆ. ಹೀಗಾಗಿ, ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಸುಗಂಧ ದ್ರವ್ಯಗಳ ಹಾಗೂ ಮಾದಕ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ.