ಸುದ್ದಿ ಕಣಜ.ಕಾಂ | KARNATAKA | MYSURU RANGAYANA
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ `ಪರ್ವ’ ಕಾದಂಬರಿಯ ಮಹಾರಂಗ ಪ್ರಯೋಗವನ್ನು ಮೇ 5ರಂದು ಪ್ರದರ್ಶಿಸಲಾಗುತ್ತಿದೆ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು, ಮೈಸೂರು ರಂಗಾಯಣವು ಸಿದ್ಧಪಡಿಸಿ ರಂಗಪಯಣದ ಮೂಲಕ ಪ್ರದರ್ಶಿಸುತ್ತಿರುವ ರಂಗ ಪಯಣದ ಮೊದಲ ಹೆಜ್ಜೆ ಈಗಾಗಲೇ ಬೆಂಗಳೂರಿನಲ್ಲಿ ಆರಂಭವಾಗಿದೆ ಎಂದು ತಿಳಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ರಾಷ್ಟ್ರದ ಐದು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನ ಮಾಡಲು ಯೋಜನೆ ರೂಪಿಸಲಾಗಿದೆ. ಎಸ್.ಎಲ್. ಭೈರಪ್ಪ ಅವರ 600 ಪುಟಗಳ ಪರ್ವ ಕಾದಂಬರಿಯ ಮೂಲ ಕೃತಿಗೆ ಎಲ್ಲಿಯೂ ಲೋಪ ಆಗದಂತೆ ವಸ್ತುನಿಷ್ಠವಾಗಿ ಆಧುನಿಕ ಪರಿಕಲ್ಪನೆಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ರಂಗಪಠ್ಯ ರೂಪಿಸಿ, ನಿರ್ದೇಶನ ಮಾಡಿದ್ದಾರೆ ಎಂದರು.
50 ಜನ ಕಲಾವಿದರ 6 ತಿಂಗಳ ಪರಿಶ್ರಮದ ಫಲ
ಕಲಾವಿದರು, ತಂತ್ರಜ್ಞರು ಸೇರಿ 50 ಜನರ ತಂಡ 6 ತಿಂಗಳ ಪರಿಶ್ರಮದಲ್ಲಿ ಮಹಾ ರಂಗಪ್ರಯೋಗ ಕಟ್ಟಿದ್ದಾರೆ. ಕನ್ನಡ ರಂಗಭೂಮಿ ವಿಶ್ವ ಹಾಗೂ ಭಾರತೀಯ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಬೇಕೆಂಬುದು ಮೈಸೂರು ರಂಗಾಯಣದ ಕನಸಾಗಿದ್ದು, ಇದು ಈಗಾಗಲೇ 20 ಪ್ರದರ್ಶನ ಕಂಡಿದೆ. ಮೈಸೂರು ರಂಗಾಯಣದ ಸಾಹಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 50 ಲಕ್ಷ ರೂ. ಆರ್ಥಿಕ ನೆರವು ನೀಡಿದೆ.
ನಾಟಕದ ಬಗ್ಗೆ ಒಂದಿಷ್ಟು ಮಾಹಿತಿ
ನಾಲ್ಕು ವಿರಾಮಗಳು ಸೇರಿ 8 ತಾಸುಗಳ ನಾಟಕ ಇದಾಗಿದೆ. ಊಟಕ್ಕೆ ಮಧ್ಯೆ 30 ನಿಮಿಷ ವಿರಾಮ ದೊರಕಲಿದೆ. ಈ ಮಹಾ ಪ್ರಯೋಗದ ಖರ್ಚು ವೆಚ್ಚ ಎಲ್ಲ ಸೇರಿಸಿ 200 ರೂಪಾಯಿ ಟಿಕೆಟ್ ನಿಗದಿಪಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಟಿಕೆಟ್ ದೊರೆಯಲಿವೆ. ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ಆಡಳಿತಾಧಿಕಾರಿ ಡಾ.ಎಂ.ಸಿ.ಶೈಲಜಾ ಇದ್ದರು.